Tuesday, April 2, 2013

ಸ್ಮೃತಿ ಪಟಲದೊಳಗೆ

ಸ್ಮೃತಿ ಪಟಲದೊಳಗೆ
-------------------
ಮಂಜು ಮುಸುಕಿದ ಮುಂಜಾವಿನಲಿ
ಬೆಳಕು ಚಿತ್ತಾರ
ಇನ್ನೂ ಮೂಡಿರದ ಸಮಯ
ಕೊರಳ ಇಂಪು
ಇನ್ನು ಹೊರಡುವಾಗಲೇ
ಅರಳು ಮರಳು
ಸ್ಮೃತಿಪಟಲದೊಳಗೆ ಎಲ್ಲಾ ಖಾಲಿ ಖಾಲಿ
ಎಲ್ಲಾ ಕಳಕೊಂಡವರಂತೆ ಬಟಾಬಯಲು

ಚಿಗುರಿ ಅರಳುವ ಮುನ್ನ
ಅರಳಿದ ನೋಟ
ಚೈತ್ರ ಚೈತ್ರಗಳು ಕಳೆದುಹೋದರೂ
ಎಲ್ಲೋ ನೋಡಿದ ನೆನಪು!
ಖಾಲಿ ಹಾಳೆಯ ತುಂಬಾ
ಗುರುತು ಸಿಗದ
ಖಾಲಿ ನೋಟಗಳು
ವಸಂತ ಸರಿದು ಹೋಗುತ್ತಿದೆ
ಬದುಕು ಕೂಡಾ ಸರಿದು ಹೋಗುತ್ತಿದೆ
ಆದರೆ,
ಇತಿಹಾಸದ ಬೇರುಗಳು
ಬೇರುಬಿಟ್ಟಿರುತ್ತವೆ ಗಟ್ಟಿಯಾಗಿ ಸ್ಮೃತಿಪಟಲದೊಳಗೆ.....

ನಗುವ ಮಲ್ಲಿಗೆಘಮ್ಮೆಂದು
ಅರಳುವ ಪಾರಿಜಾತದ ಹೂವು
ಪಟಪಟನೆ ಉದುರುವ ಮಾತಿನ
ಸ್ವಾತಿ ಮಳೆ ಹನಿಯೇ?
ಕ್ಷಣಿಕ.....
ಯೋಚನೆಯ ಸುಳಿಯಲ್ಲಿ
ಕರಗಿ ಹೋಗುತ್ತದೆ
ನೆನಪಿನಾಳದ ಸ್ಮೃತಿಪಟಲದೊಳಗೆ.......

ಕ್ಷಮಯಾ ಧರಿತ್ರಿ

ಕ್ಷಮಯಾ ಧರಿತ್ರಿ
----------------
ಕಂಡಿರಾ ನೀವು
ನಮ್ಮೂರ ಉದ್ಯಾನದಲಿ
ಅರಳಿ ತಲೆ ಎತ್ತಿನಿಂತ ಗಿಡವ........?
ವಸಂತ ಬಂತೆಂದರೆ
ಅದಕ್ಕೆ ಎಲ್ಲಿಲ್ಲದ ಸಂಭ್ರಮ!
ಚಿಗುರು ಚಿಗುರಿ, ಹಸಿರೊಡೆದು
ಮೈ ವಿಕಸಿಸಿ
ಕೊಂಬೆ ಕೊಂಬೆಗಳಲ್ಲೂ
ಹಣ್ಣು ತೂಗಿ
ತೊಯ್ದಾಡುತ್ತದೆ ಲಜ್ಜೆಯಿಂದ.

ನೆರಳಾರಿಸಿ ಬಂದವರು ಸುಮ್ಮನಿರದೇ
ಹಣ್ಣು ಕಿತ್ತು, ಹರಿದು ಮುಕ್ಕುತ್ತಾ
ಬಯಲಾಗಿಸುತ್ತಾ ಮರೆಯಾದಾಗ
ನನ್ನ ಮನದಲಿ
ಓ! ತಾಯಿ
ನಿನ್ನದೇ ನೆನಪು
ನೀ ಕೂಡಾ ಹಸಿರಾದೆ, ಬಸಿರಾದೆ
ಸೃಷ್ಟಿಸಿದೆ ಹೂಕಾಯಿಗಳ
ಅವು ಚಿಗುರಲೆಂದು ಬರಿದಾಗಿಸಿದೆ.

ಬಂದವರು ಕಿತ್ತು ತಿಂದರೂ
ನೀ ಸುಮ್ಮನಾದೆ
ನಿನ್ನನ್ನೇ ಮರೆತರು
ಆದರೂ,
ನಿನ್ನ ತನ ಮಾಯಲಿಲ್ಲ
ನಿನ್ನ ಕಡಿದಷ್ಟೂ ಚಿಗುರುತ್ತೀಯಾ
ಜೀವರಾಶಿಗೆ ಅಶ್ರಯ ನೀಡುತ್ತೀಯಾ
ಮನಕೆ ಆನಂದ ನೀಡುತ್ತೀಯಾ
ನೀನು ಸಾಮಾನ್ಯಳಲ್ಲ
ನೀನು ’ಕ್ಷಮಯಾ ಧರಿತ್ರಿ’ !!

ನಿವೇದನೆ

ನಿವೇದನೆ
-------------
ಕೊರಗದಿರು ಗೆಳತಿ
ನಿನ್ನಷ್ಟಕ್ಕೆ ನೀನೇ
ಕರಗದು ಕಷ್ಟಗಳು
ತಮ್ಮಷ್ಟಕ್ಕೆ ತಾವೇ
ನಿನ್ನೊಡನೆ ಜೊತೆಯಾಗಿ ನಾನಿಲ್ಲವೇನು..?
ಸಂತಸದಂತೆ ನೋವನ್ನೂ ಹಂಚಿಕೊಳ್ಳಲಾರನೇ?

ನಿನ್ನೆ ಸರಿದ ಕ್ಷಣಗಳು
ಬರದೆಂದು ಮುಂದೆ
ನಾಳೆಯನು ಹತ್ತಿರಕ್ಕೆ
ಕರೆಯಲಾರೆವು ಇಂದೇ
ಇವುಗಳ ನಡುವಿರುವ
ಇಂದು ಮಾತ್ರವೇ ನಮ್ಮದು.

ಶ್ರೀಮಂತಗೊಳಿಸೋಣ ಇತಿಹಾಸ
ಭವಿಷ್ಯವ ಮರೆತು
ಒಂಟಿಯೆಂಬ ಭಾವನೆ
ಬಿಟ್ಟುಬಿಡು ನೀನು
ಒಡನಾಡಿಯಾಗಿ ಸದಾ ನಾನಿರುವೆನಿನ್ನು.

ಸಂಜೆ ಸೊಬಗು

ಸಂಜೆ ಸೊಬಗು
---------------------
ಎಂದಿನಂತೆ ಕೆಂಪೆಡರಿದ
ಸೂರ್ಯನ ಕೆಂಬಣ್ಣ
ಪಸರಿಸಿದೆ ಪಶ್ಚಿಮದ
ಬಾನ ದಿಗಂತದಲ್ಲಿ.
ಇದಕ್ಕೆ ಸಾಕ್ಷಿಯೋ ಎಂಬಂತೆ
ಗೂಡು ಸೇರುವ ತವಕದಲಿ
ಚಿಲಿಪಿಲಿಗುಟ್ಟು ಹಾರುವ ಹಕ್ಕಿಗಳು ,
ಮೇಲಿಂದ ಮೇಲೆ
ಧರೆಗೆ ಅಪ್ಪಳಿಸುವ
ಸಮುದ್ರ ರಾಜ !
ಕೊರೆದಷ್ಟೂ ಉದ್ಭವಿಸುವ ಉಸುಕು
ಮುಗಿಯಲಾರದ ಅಕ್ಷಯ ಪಾತ್ರೆ.....!!
ಅಲ್ಲಲ್ಲಿ ಮೊಡಿಬಂದ
ಹೆಜ್ಜೆ ಗುರುತು
ಸೂರ್ಯ ಇಳಿದಂತೆ
ಮೊಡಿ ಬರುವ ನೆರಳು
ದಿನಚರಿಯಲ್ಲಿ ಬರೆಯುವ
ಒಂದು ಸಂಜೆ ಸೊಬಗು..!

ನೀರಿಗಾಗಿ ಕಾಯಬೇಕು

ನೀರಿಗಾಗಿ ಕಾಯಬೇಕು
--------------------------
ನೀರು ನೀರೆಂದು
ನಲ್ಲಿಯ ಮುಂದೆ ಕೂತರೆ
ನೀರು ಬಂದೀತೇ ..?
ಇಲ್ಲ , ಬರಲಿಲ್ಲ
ಬದಲು ಬಂದೀತು
ಒಂದಿಷ್ಟು ಕಣ್ಣೀರು !

ಎಷ್ಟು ದಿನ ಕಾಯಬಹುದು
ನೀರ ಹನಿಗಾಗಿ..?
ಬಾಯಾರಿ ಗಂಟಲು ಒಣಗುತಿದೆ
ಕಣ್ಣೀರು ಬತ್ತಿದೆ
ಒಡಲೊಳಗೆ ಹಸಿವಿನ
ಲವಾರಸ ತಳಮಳಿಸುತ್ತಿದೆ
ಹಿಮ ಕರಗಿ ನೀರಾಗುವುದನ್ನು.....
ನಮ್ಮ ಬಿಸಿಯುಸಿರು
ಕರಗಿ ತಂಪಾಗುವುದನ್ನು.......

ಆದರೂ ಕಾಯಬೇಕು
ಚಾತಕ ಪಕ್ಷಿಯಂತೆ
ಆಕಾಶದತ್ತ ನೇರದೃಷ್ಟಿ ಇಟ್ಟು
ಬಾರದ ನೀರಿಗಾಗಿ
ಕಾಯುತ್ತಲೇ ಇರಬೇಕು
ನೀರ ಹನಿ ಇಲ್ಲದಿದ್ದರೂ ಸರಿ ,
ಕನಸಿನಲ್ಲಿ ತೇಲಾಡುವ ನಾವು
ನೋವಿನ ನಿಟ್ಟುಸಿರ
ಹೃದಯದ ’ಫ್ರಿಜ್ ’ ನಲ್ಲಿ ಬೆಚ್ಚಗಿರಿಸಬೇಕು
ಯಾಕೆಂದರೆ ,
ನಾವು ಈ ಭೂಮಿಯಲ್ಲಿ
ಬದುಕಬೇಕಾದವರು ಅದಕ್ಕೇ ..!

ಪ್ರತೀಕ್ಷೆ

ಪ್ರತೀಕ್ಷೆ
----------------

ನೀರವ ವಾತಾವರಣದಲ್ಲಿ
ದೂರದಿಂದ ಕೇಳಿ ಬರುವ
ಲಯಬದ್ಧ ಸಂಗೀತ
ಕೋಗಿಲೆಯ ಇಂಪಾದ ಇಂಚರಗಳು
ನನ್ನ ಮನವ ಛಿದ್ರಗೊಳಿಸಲಾರವು
ಕಾರಣ ಅವುಗಳು ನನ್ನ ನಲ್ಲೆಯ
ಹೊತ್ತು ತರಲಾರವು

ಹತ್ತಿರದಲ್ಲಿ ನಡೆಯುವ
ರಂಗ ಸಜ್ಜಿನ ಗೆಜ್ಜೆ ಕುಣಿತ
ಹಕ್ಕಿಗಳ ಪಟಪಟ ಸದ್ದು
ಲಲ್ಲೆಗರೆಯುವ ತಾಯಿ
ಇವುಗಳು ನನ್ನ ಎಚ್ಚರಗೊಳಿಸಲಾರವು
ಯಾಕೆಂದರೆ , ಇವು ನನ್ನ ನಲ್ಲೆಯ
ಹೊತ್ತು ತರಲಾರವು

ಹಚ್ಚ ಹಸಿರಿನ ಸಿರಿತನದಲಿ
ಚಿಗುರಿ ನಿಂತ ಮಾಮರ
ವಸಂತ ಅನುಭವಿಸಿ
ಕೈ ಬೀಸಿ ಕರೆದಾಗ ,
ನವಿಲು ಗರಿಬಿಚ್ಚಿ ಕುಣಿದಂತೆ
ನಾನು ಕುಣಿಯುವುದಿಲ್ಲ
ಏಕೆಂದರೆ , ಇದಾವುದರ ಪರಿವೆ ಇಲ್ಲದೇ
ನನ್ನ ನಲ್ಲೆಯ ಬರುವಿಕೆಗಾಗಿ ಕಾಯುತ್ತಿದ್ದೇನೆ

ಆಕಾಶದಲ್ಲಿ ಕಪ್ಪು ಹಗುರ ಕರಗಿ
ಸಾವಕಾಶವಾಗಿ ಬೆಳ್ಳಿ ಮೂಡಿದಂತೆ
ಮನದಾಳದಲ್ಲಿ ಅಡಗಿರುವ
ಯಾವುದೋ ಒಂದು ಆಸೆಯ ಕೊಡಿ
ನಿಮಿರಿ ನಿಲ್ಲುತ್ತದೆ ನಲ್ಲೆಯ ಬರುವಿಕೆಗಾಗಿ.

ಕಾತರ

ಕಾತರ
-----------
ನೀರವ ವಾತಾವರಣದಲಿ
ಕಳೆದ ವಸಂತದಲಿ
ಮೊಗ್ಗರಳಿ ಹೂವಾಗಿ
ಸುತ್ತೆಲ್ಲಾ ತಂಪೆರಚಿದಂತೆ
ಬದುಕಿನ ನಿಗೂಢತೆಯನಳೆಯುವ
ಮೌನ ಹೊಸ ರೂಪ ತಾಳುತ್ತದೆ.

ಕಣ್ಣಲ್ಲಿ ಮಿಂಚುವ
ಹೊಸ ಭಾವ
ಅಂತರಾಳದಲ್ಲಿ ಮೂಡಿಬಂದ
ಕನಸು , ರೆಕ್ಕೆ ಪುಕ್ಕ ಕಟ್ಟಿ ವಿಹರಿಸುತ್ತದೆ.

ಚಿಗುರು ಮಾಮರದ ಮೇಲೆ
ಕೂತು ಕೂಗುವ ಕೋಗಿಲೆಯಂತೆ ಕೂಗಿ
ಬಣ್ಣದ ರಂಗು ಕಟ್ಟಿ ಹಾರಾಡುತ್ತಾಳೆ.

ಹೊಸ ಹೊಸ ರೂಪದ
ಹೊಸ ದಿಗಂತದಲಿ
ವಿಹರಿಸುತ್ತಾ ನಾಳಿನ ಸವಿ ನೆನಪಿಗಾಗಿ
ಕಾತರಿಸುತ್ತಾಳೆ.....