Sunday, November 25, 2012

ಚಳಿಗಾಲದ ಬಿಸಿಲು


ಗರಿಗೆದರಿ ನಿಂತ ಭಾವನೆಗಳು
ಪುಟಿದೇಳುತ್ತವೆ ಅಂತರಾಳದಲ್ಲಿ
ಹೊಸ ಕನಸುಗಳ ಕಾಣುತ್ತ
ಸಾಗರದಾಚೆ ಕಂಡ ಬಾನಲ್ಲಿ
ಇಳಿಬಿದ್ದ  ಸೂರ್ಯ ನಗುತ್ತಾನೆ
ಮುಂಗಾರಿನ ಮಳೆಹನಿ ಕಂಡು
ಕಾದ ತೊಯ್ದ ಹನಿಗಳ ಸಾಲು
ಎಳೆ ಮರಿಯ ನೋಯಿಸಿದ
ಇಬ್ಬನಿ ತುಂಬಿದ ಹಸಿರು
ಕಂಪಿಸುತ್ತದೆ ಚಳಿಗಾಲದ ಬಿಸಿಲಿಗೆ
ನಗುಮೊಗದ ಚಲುವೆಯ
ನೋಟಗಳ ಸವಿಯಲ್ಲಿ
ಇರುಳು ಸರಿಯುತ್ತದೆ
ತೋಳುಗಳ ಬಳಸುತ್ತಾ
ಕಾಡುವ ನೆನಪುಗಳು
ಗೆಳತಿಯ ಬರುವಿಕೆಗಾಗಿ
ಮಾಗಿ ಸಾಗಿದೆ
ಬತ್ತಲೆ ಕನಸುಗಳ ಮೆಟ್ಟಿ
ಗೋರಿಯ ಮೇಲಿನ ಹಾಡು
ಎದೆ ತಟ್ಟಿ ಬಿಗಿಯುತ್ತಾ
ನೂರೆಂಟು ಬಯಕೆಗಳು
ಎದೆಯಾಳದಲ್ಲಿ ಬಿರಿಯುತ್ತವೆ
ಕಡಲ ಮೇಲಿನ ಗಾಳಿ
ತೋಯಿಸಿದ ಬಟ್ಟೆ ತೆಳುವು
ತರುಣಿಯ ಎದೆಮಟ್ಟ
ಬೆಳೆದು ನಿಂತ ಹೂಬಳ್ಳಿ
ತೋಟದಲ್ಲಿ ಸದಾ ಬೆಳಗು

Monday, October 29, 2012

prabhakartamragouri: ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆನಿಂತಿದೆ

prabhakartamragouri: ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆನಿಂತಿದೆ:  ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆ ನಿಂತಿದೆ ಅಂದು ರಾಷ್ತ್ರೀಯ ಭಾವನೆ ಸಮಾಜದಲ್ಲಿ ಸದಾ ಜಾಗೃತ ಸ್ಥಿತಿಯಲ್ಲಿತ್ತು. ಬದುಕಿನಲ್ಲಿ ಒಂದು ಆದರ್ಶವಿತ್ತು. ನೀತ...

ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆನಿಂತಿದೆ

 ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆ ನಿಂತಿದೆ

ಅಂದು ರಾಷ್ತ್ರೀಯ ಭಾವನೆ ಸಮಾಜದಲ್ಲಿ ಸದಾ ಜಾಗೃತ ಸ್ಥಿತಿಯಲ್ಲಿತ್ತು. ಬದುಕಿನಲ್ಲಿ ಒಂದು ಆದರ್ಶವಿತ್ತು. ನೀತಿ, ಮೌಲ್ಯ, ಚಾರಿತ್ರ್ಯರಹಿತ ಬದುಕು ಬದುಕಲ್ಲ ಎಂಬ ಎಚ್ಚರಿಕೆ ಇತ್ತು. ಆದರೀಗ ಪಾಶ್ಚಾತ್ಯ ಅಂಧಾನುಕರಣೆ, ಸಗಟು ಮತಗಳಿಗಾಗಿ ತುಷ್ಟ್ಟೀಕರಣದ ಮೂಲಕ ಸಮಾಜವನ್ನು ಒಡೆಯುವ ವಿಭಜನಕಾರಿ ರಾಜಕೀಯ, ಭೋಗವಾದದಿಂದಾಗಿ ಸಮಾಜದಲ್ಲಿ ಅಶಾಂತಿ, ಅನೈತಿಕತೆ, ಸ್ವಾರ್ಥ ವಿಜೃಂಭಿಸುವಂತಾಗಿದೆ.

         ’ಪ್ರಗತಿಪರ ಬಳಕೆ ಸಿದ್ದಾಂತ’ ಪ್ರತಿಪಾದಕ ಡಾ. ರವಿ ಭಾತ್ರಾ ಹೇಳುವಂತೆ, ದೇಶದಲ್ಲಿ ಮಾನವ ಸಂಪನ್ಮೂಲ ಸೇರಿದಂತೆ ಎಲ್ಲಾ ರೀತಿಯ ಸಂಪತ್ತೂ ಇದೆ. ಆದರೆ ಆಧ್ಯಾತ್ಮ ರಹಿತವಾಗಿ ಭೋಗಪ್ರಧಾನ ಭೌತಿಕವಾದದಿಂದ ಜನಜೀವನ ಉಸುಕಿನ ಮೇಲೆ ಕಟ್ಟಿದ ಕಟ್ಟಡದಂತಾಗಿಬಿಟ್ಟಿದೆ.
     
       ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆ ನಿಂತಿದೆ. ಇದು ಭೋಗಭೂಮಿಯಲ್ಲ, ತ್ಯಾಗ ಭೂಮಿ. ಇಂದು ವಿವ್ಯುನ್ಮಾನ ಮಾಧ್ಯಮ, ಚಲನಚಿತ್ರ, ಶಿಕ್ಷಣ, ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲಿ ಅನೈತಿಕತೆಯೇ ವಿಜೃಂಭಿಸುತ್ತಿದೆ.

     ಅಹಂ ಬಿಟ್ಟುಬಿಡೋಣ ಪರಂಪರಾಗತವಾಗಿ ಬಂದಿರುವ ಸಂಪ್ರದಾಯ, ರಿವಾಜುಗಳು ಮನೆಯೊಳಗಿರಲಿ. ಸಂಸ್ಕಾರದಲ್ಲಿ ಯೋಗ್ಯ ಹಿಂದುವಾಗಿರೋಣ, ರಾಷ್ಟ್ರೀಯತೆಯಲ್ಲಿ ಭಾರತೀಯರಾಗಿರೋಣ! ಎಲ್ಲರೊಂದಿಗೆ ಬೆರೆಯುವಾಗ ವಿಶ್ವಮಾನವನಾಗಿರೋಣ.

Sunday, October 28, 2012

ಆಧ್ಯಾತ್ಮಿಕ ಪರಂಪರೆ

ಆಧ್ಯಾತ್ಮಿಕ  ಪರಂಪರೆ

 ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎನ್ನುವುದು ನಿಜವಾದರೂ, ನಿಯಂತ್ರಣ ಅಸಾಧ್ಯವೇನಲ್ಲ. ನಮ್ಮದು ಸ್ವಭಾವತಃ ಧರ್ಮಿಕ, ಆಧ್ಯಾತ್ಮಿಕ ಚಿಂತನೆಯ  ದೇಶ. ಈ ದೇಶವನ್ನು ಆಳಿದ  ರಾಜ ಮಹಾರಾಜರು, ಆಧ್ಯಾತ್ಮಿಕ ಚಿಂತಕರನ್ನು ಗುರುವಾಗಿ ಸ್ವೀಕರಿಸಿದ ಪರಂಪರೆ ನಮ್ಮದು. ಶ್ರೀರಾಮನಿಗೆ ವಸಿಷ್ಠರು, ಶಿವಾಜಿಗೆ ರಾಮದಾಸರು, ಹುಕ್ಕಬುಕ್ಕರಿಗೆ ವಿದ್ಯಾರಣ್ಣರು- ಹೀಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಾಧಕರು ದೇಶಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಧರ್ಮದ ನೆಲೆಯಲ್ಲಿ  ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ ಪವಿತ್ರ ಪರಂಪರೆ ಇಲ್ಲಿಯದು.

                  ಹೀಗಿದ್ರೂ  ಭ್ರಷ್ಟಾಚಾರದಲ್ಲಿ ದೇಶ ಮುಂಚೂಣಿಯಲ್ಲಿರುವುದು ದುರದೃಷ್ಟಕರ. ಆಧ್ಯಾತ್ಮದ ಕಡಗಣನೆಯೇ ಇದಕ್ಕೆ ಕಾರಣ. ಶಿಕ್ಷಣ ಕ್ಷೇತ್ರದಲ್ಲಿ ಆಧ್ಯಾತ್ಮ ಎಂದರೆ ಕಮ್ಯುನಲ್ ಎನ್ನುವ ಕೆಟ್ಟ ಚಿಂತನೆಗಳು ನಮ್ಮ ಜನಪ್ರತಿನಿಧಿಗಳಲ್ಲಿ ಹುಟ್ಟಿದ್ದೇ ಅನಾಹುತಗಳಿಗೆ ಕಾರಣ. ಭ್ರಷ್ಟಾಚಾರವು ಮಹಾ ಪಾಪ ಎನ್ನುವ ತಿಳಿವಳಿಕೆ ಬರಬೇಕು. ಧರ್ಮ ಗುರುಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು.

Thursday, December 9, 2010

ಆಷಾಢದಲ್ಲೊಂದು ದಿನ

ಆಷಾಢದಲ್ಲೊಂದು ದಿನ
ಇದ್ದಕ್ಕಿದ್ದಂತೆ ನೀನು ಬಂದೆ
ಇಳಿ ಸಂಜೆ ಮಳೆಯಂತೆ
ತುಂಬಿ ಹರಿವ ಹೊಳೆ
ಬಳಿ ಸಾರಿ ಬಂದಂತೆ
ತೆವಳುತ್ತಾ ತೆವಳುತ್ತಾ
ಬೇರು ,ಜೀವ ಜಲ ಹುಡುಕುತ್ತಾ....
ತೊರೆ ದೂರವಿದ್ದರೂ
ತಂಪು ಹೊತ್ತು
ಬರುವ ತಂಗಾಳಿಯಂತೆ....
ಮುಂಜಾನೆಯ ಎಳೆ ಬಿಸಿಲಿಗೆ
ಮೊಗ್ಗರಳಿ ಲಾಸ್ಯದಲ್ಲಿ ಅರಳಿದ
ಹೂಗಳ ಪರಿಮಳದ ಭಾರಕ್ಕೆ
ಬೀಸುವ ಗಾಳಿಯಲ್ಲಿ
ಸುಗಂಧ ಪಲ್ಲವಿಸಿದಂತೆ
ಹಾಗೇ ತೆರೆದಿಟ್ಟ
ಕಿಟಿಕಿ,ಬಾಗಿಲು
ಹೇಳಲಿಲ್ಲ, ಕೇಳಲಿಲ್ಲ
ಒಳಗೆ ಇಟ್ಟಾಗಿದೆ ಹೆಜ್ಜೆ
ಇನ್ನೂ ಸ್ವಲ್ಪ ಹೊತ್ತು
ಇರಬಾರದೇ ಹೀಗೆ....?!
ಇಂದ: ಪ್ರಭಕರ ತಾಮ್ರಗೌರಿ, ಗೋಕರ್ಣ




ಕಾರ್ತಿಕದ ಬೆಳಕು

07 December 2010, 20:00:00 | PRABHAKAR TAMRAGOURI



ದೀಪ ಹಚ್ಚಬೇಕು

ಅದು ಬೆಳಗಿ ಒಳಗಿನೊಳಗೆ

ಕತ್ತಲ ಬಸಿರೊಡೆದು

ಸ್ಪಷ್ಟವಾಗಬೇಕು ಒಳಗಿನೊಳಗು !


ಮೂಲೆ ಮೂಲೆಗೂ

ಕಿರಣಗಳು ತೂರಿ

ಬೆಳಗುತಿರಲಿ ನಿನ್ನ

ಕಣ್ಣುಗಳ ಹಾಗೆ

ಅದು ಅರಳುತಿರಲಿ ನಿನ್ನ

ನಗುವಿನ ಹಾಗೆ


ನೂತ ಜೇಡನ ಬಲೆ ತೊಡೆದು

ಕಸ ಗುಡಿಸಿ, ಕಪಾಟಿನ

ಧೂಳು ಝಾಡಿಸಿ

ಹೊತ್ತಗೆಗಳ ಒಪ್ಪವಾಗಿಡಬೇಕು.....


ಹಚ್ಚಿಟ್ಟ ದೀಪದ ಬೆಳಕು

ಅದು ಸುತ್ತಲೂ ವಿಸ್ತರಿಸಲಿ

ನಿನ್ನ ಹೆಜ್ಜೆ ಗುರುತಿನ ಹಾಗೆ

ಕತ್ತಲಿನಿಂದ ಬೆಳಕಿನೆಡೆಗೆ

ಬೆಳಕಿನಿಂದ ಕತ್ತಲಿನೆಡೆಗೆ.....


ಹಚ್ಚಿಟ್ಟ ದೀಪದ ಕೆಳಗೆ

ದೇವರ ಪೀಠದ ಮೇಲೆ

ಗಂಧದಕಡ್ಡಿ ಉರಿದುರಿದು

ಘಮಘಮಿಸಬೇಕು ಸುತ್ತೆಲ್ಲಾ

ಅನುಭವದೊಡನೆ ಅನುಭಾವಬೆರೆತು

ಬೆಳಗಬೇಕು ನೀ ಹಚ್ಚಿಟ್ಟ

ಹಣತೆಯ ಬೆಳಕು

ಈ ನೆಲದ ಬದುಕು

ಕಾರ್ತಿಕದ ರಾತ್ರಿಯಲಿ ದೀಪ ಬೆಳಗಿದಂತೆ

ಮನದಲ್ಲೇ ನಿರಂತರ

ಹಣತೆಯ ಹಚ್ಚುತ್ತಲೇ ಇರು....

Monday, December 6, 2010

prabhakartamragouri: kavana

prabhakartamragouri: kavana: "ಹಗಲುಗನ್ನಡಿ  ಬದುಕಿನ ಅಂತರಾಳದಲ್ಲಿ ಕಳೆದು ಹೋದ ಸುಂದರ ಕನಸುಗಳು ಒಂದೊಂದಾಗಿ ಹೂತುಹೋಗಿವೆ ಹೃದಯದಾಳದ ಮಧುರ ಭಾವನೆಗಳಲ್ಲಿ ನೆನಪಿನಾಳದಲ್ಲಿ ನೆನೆದುಹಾಕಿದ ಕೆಟ್..."