Wednesday, December 26, 2012

ಕ್ಷಮಯಾ ಧರಿತ್ರಿ


ಕಂಡಿರಾ ನೀವು
ನಮ್ಮೂರ ಉದ್ಯಾನದಲಿ
ಅರಳಿ ತಲೆ ಎತ್ತಿನಿಂತ ಗಿಡವ........?
ವಸಂತ ಬಂತೆಂದರೆ
ಅದಕ್ಕೆ ಎಲ್ಲಿಲ್ಲದ ಸಂಭ್ರಮ!
ಚಿಗುರು ಚಿಗುರಿ, ಹಸಿರೊಡೆದು
ಮೈ ವಿಕಸಿಸಿ
ಕೊಂಬೆ ಕೊಂಬೆಗಳಲ್ಲೂ
ಹಣ್ಣು ತೂಗಿ
ತೊಯ್ದಾಡುತ್ತದೆ ಲಜ್ಜೆಯಿಂದ.

ನೆರಳಾರಿಸಿ ಬಂದವರು ಸುಮ್ಮನಿರದೇ
ಹಣ್ಣು ಕಿತ್ತು, ಹರಿದು ಮುಕ್ಕುತ್ತಾ
ಬಯಲಾಗಿಸುತ್ತಾ ಮರೆಯಾದಾಗ
ನನ್ನ ಮನದಲಿ
ಓ! ತಾಯಿ
ನಿನ್ನದೇ ನೆನಪು
ನೀ ಕೂಡಾ ಹಸಿರಾದೆ, ಬಸಿರಾದೆ
ಸೃಷ್ಟಿಸಿದೆ ಹೂಕಾಯಿಗಳ
ಅವು ಚಿಗುರಲೆಂದು ಬರಿದಾಗಿಸಿದೆ.

ಬಂದವರು ಕಿತ್ತು ತಿಂದರೂ
ನೀ ಸುಮ್ಮನಾದೆ
ನಿನ್ನನ್ನೇ ಮರೆತರು
ಆದರೂ,
ನಿನ್ನ ತನ ಮಾಯಲಿಲ್ಲ
ನಿನ್ನ ಕಡಿದಷ್ಟೂ ಚಿಗುರುತ್ತೀಯಾ
ಜೀವರಾಶಿಗೆ ಅಶ್ರಯ ನೀಡುತ್ತೀಯಾ
ಮನಕೆ ಆನಂದ ನೀಡುತ್ತೀಯಾ
ನೀನು ಸಾಮಾನ್ಯಳಲ್ಲ
ನೀನು ’ಕ್ಷಮಯಾ ಧರಿತ್ರಿ’ !!

Tuesday, December 18, 2012

ಜನಾದೇಶ ಒಳ್ಳೇದು

ದೇಶದ ತುಂಬಾ ಭ್ರಷ್ಟಾಚಾರ ತಲೆ ಎತ್ತಿದೆ. ಎಲ್ಲಾ ಕಡೆ ಭ್ರಷ್ಟರೇ ತುಂಬಿದ್ದಾರೆ. ಇಂತವರಿಂದ ರಾಜಕೀಯ ಸುಧಾರಣೆ ಹೇಗೆ ಸಾಧ್ಯ? ಎಲ್ಲಾ ಸ್ವಾರ್ಥಿಗಳೇ! ದೇಶದ ಬಗ್ಗೆ , ನಾಡಿನ ಜನರ ಬಗ್ಗೆ ಕಾಳಜಿ ವಹಿಸುವವರು ಯಾರು? ಜನಾದೇಶ ಇದ್ದರೆ ಒಳ್ಳೆಯದು. ಆಗಲಾದರೂ ಜನರಿಗೆ ಒಳ್ಳೆದಾಗಬಹುದು. ನಿಮ್ಮ ಅಭಿಪ್ರಾಯ ಏನು?

ಕನ್ನಡಸಿನಿಮಾದ " ಡಬ್ಬಿಂಗ್ ಸಂಸ್ಕತಿ"

ಇತ್ತೀಚೆಗೆ ಬಹಳ ಚರ್ಚಿತ ವಿಷಯ ಎಂತದು ಅಂದ್ರೆ ಕನ್ನಡ ಸಿನಿಮಾದ"ಡಬ್ಬಿಂಗ್ ಸಂಸ್ಕೃತಿ".ಯಾಕಾಗಿ ಹೋರಾಟ ಮಾಡ್ತೋ ಹೇಳಿ
ಗುತ್ತಾಗ್ತಿಲ್ಲೆ. ಬೇರೆ ಬೇರೆ ಭಾಷೆಯಲ್ಲೂ ಸಹ ಒಳ್ಳೊಳ್ಳೆ ಸಾಹಿತಿಗಳು ಎಷ್ಟೋ ಮಂದಿ ಇದ್ದೊ. ಅಂತಹ ಸಾಹಿತಿಗಳ ಕೃತಿಗಳನ್ನ ಬೇರೆ ಬೇರೆ ಭಾಷೆಗೆ ಹಾಗು ಕನ್ನಡಕ್ಕೂ ಕೂಡ ತರ್ಜುಮೆ ಮಾಡಿ ಅಂತಹ ಪುಸ್ತಕಗಳನ್ನ ನಾವು ಓದ್ತೊ. ಅದೇ ರೀತಿ ಬೇರೆ ಭಾಷೆಯಲ್ಲಿರುವ ಒಳ್ಳೊಳ್ಳೆ ಸಿನಿಮಾಗಳನ್ನ ಕನ್ನಡಕ್ಕೆ ಡಬ್ ಮಾಡಿದರೆ ಯಾರಿಗೆ ತೊಂದರೆ ಆಗ್ತು? ನನ್ನ ಮಟ್ಟಿಗೆ ಹೇಳುದಾದ್ರೆ ಅದು ತಪ್ಪು ಹೇಳಿ ನನ್ಗೆ ಅನಿಸ್ತಿಲ್ಲೆ. ಇದರಿಂದ ಕನ್ನಡಕ್ಕೆ ಯಾವ್ದೇ ಪೆಟ್ಟಿಲ್ಲೆ. ನಿಮ್ಗೆ ಯಾರಿಗಾದ್ರುವ ಹಾಗೆ ಅನಸ್ತೋ ಹೇಗೆ? ನಿಮ್ಮ ಅಭಿಪ್ರಾಯ ಎಂತದು? ಡಬ್ಬಿಂಗ್ ಸರಿನ ತಪ್ಪ? ಹೇಳ್ತ್ರಾ.

ಕಲಾಕೃತಿ

ಆ ಬಿಳಿ ಹಾಳೆಯ ಮೇಲೆ
ನನ್ನ ಒಳ ಮನಸ್ಸಿನ
ಭಾವನೆಗಳನ್ನು ಎಳೆ ಎಳೆಯಾಗಿ
ಸ್ಪಷ್ಟವಾಗಿ ಬಿಡಿಸಿಟ್ಟಿರುವೆ
ಮುಖ್ಯವಾಗಿ ಒಂದು ಆಕರ್ಷಕ
ಕೃತಿ ಹೊರಬರಲೆಂದು
ಬೆಳ್ಳಂಬೆಳಗ್ಗೆ ಮೊಡಿಬಂದ
ಸೂರ್ಯನ ಎರಕ ಹೊಯ್ದಿರುವ
ಬಣ್ಣವನ್ನು ಬಳಸಿರುವೆ
ನೂಲು ಸೀರೆಯ
ಆ ವಿನ್ಯಾಸದಲ್ಲಿ
ಪ್ರೀತಿ ಹೀರಿಕೊಳ್ಳಬಲ್ಲ
ನೀಡಬಲ್ಲ್, ಬೆಚ್ಚಗಿಡುವ
ಎಲ್ಲ ಸಾಕ್ಷಿಗಳೂ ಇವೆ
ಆ ಆಕೃತಿಯಲ್ಲಿ ಮೊಡಿಬಂದ
ಹೆಣ್ಣಿನ ಕಣ್ಣುಗಳನ್ನು
ನೀನೊಮ್ಮೆ ಆಳವಾಗಿ
ದಿಟ್ಟಿಸಿದರೆ ಸಾಕು
ಅದು ನಿನಗೋಸ್ಕರವೇ
ಜೀವಿಸಿರುವ ಮೊಡಿಪು ಕಾಣುತ್ತದೆ
ಆದರೆ, ನೀನು
ಅದೊಂದು ಕಲಾಕೃತಿ ಎಂದು
ಮಾತ್ರ ಕೊಂಡು
ನಿನ್ನ ಹವ್ಯಾಸ ತೋರಿಸಲು
ಅದಕ್ಕೆ "ಚೌಕಟ್ಟು" ಹಾಕಿಸಿ
ಅಂದವಾಗಿ ಗೋಡೆಗೆ ತೂಗುಹಾಕಿರುವೆ!

ನಿರೀಕ್ಷೆ.....


ಹೊತ್ತು ನೆತ್ತಿಗೇರುವ ಮುನ್ನ
ಮನೆಯಂಗಳವ ಸಿಂಗರಿಸಿ
ರಂಗವಲ್ಲಿ ಇಟ್ಟು
ಹೊಸಿಲಲ್ಲಿ ಕೂತ ಹುಡುಗಿ
ಕಾಯುತ್ತಾಳೆ...
ಹೊತ್ತಾರೆ ಬರಬೇಕಿದ್ದ
ಹೊಸ ಅತಿಥಿಯಾಗಮನಕ್ಕೆ
ಹಸೆ ಹರಡಿ ಬಾಗಿಲನು ತೆರೆದು

ತೆರೆದು ಬಿದ್ದಿದೆ ರಸ್ತೆ
ಹಗಲಿಗೂ ಅನಾಸ್ತೆ
ಇದ್ದೀತು ತುಳಿದು ಹೋದವರ
ನೆನಪಿನ ಮೆಲುಕು
ಎಲ್ಲಿ ಹೋಯಿತು ರಾತ್ರಿ...?
ಆ ಕಪ್ಪು...; ಆ ಮೌನ...?!

ಎಂದೋ ಬರಬೇಕಿತ್ತು
ಇನ್ನೂ ಬಂದಿಲ್ಲ
ಎಂದು ಬಂದಾನೋ?
ಕಣ್ಣಲ್ಲಿ ನಿರೀಕ್ಷೆ
ಕಾಲದ ಪರೀಕ್ಷೆ!

ಕೇಕೇ ಹಾಕುವ ಕನಸುಗಳ
ಗದ್ದಲದ ನಡುವೆ
ಆಳದಿಂದೆದ್ದ ನೋವಿನ ಕೂಗು
ಎದೆಯೊಳಕ್ಕೆ ಬಂದು
ಕದ್ದು ಆಲಿಸುತ್ತಳೆ
ಹೆಜ್ಜೆಗಳ ಸದ್ದು...

ಇಲ್ಲ, ಬಂದಿಲ್ಲ
ಕುಣಿದು ದಣಿದ ಕನಸುಗಳಿಗೆ
ಕಣ್ಣೀರ ತಿನಿಸು ಉಣಿಸುತ್ತ
ನಿರೀಕ್ಷಿಸುತ್ತಾಳೆ ಹುಡುಗಿ.....

ಸ್ಮೃತಿ ಪಟಲದೊಳಗೆ

ಮಂಜು ಮುಸುಕಿದ ಮುಂಜಾವಿನಲಿ
ಬೆಳಕು ಚಿತ್ತಾರ
ಇನ್ನೂ ಮೂಡಿರದ ಸಮಯ
ಕೊರಳ ಇಂಪು
ಇನ್ನು ಹೊರಡುವಾಗಲೇ
ಅರಳು ಮರಳು
ಸ್ಮೃತಿಪಟಲದೊಳಗೆ ಎಲ್ಲಾ ಖಾಲಿ ಖಾಲಿ
ಎಲ್ಲಾ ಕಳಕೊಂಡವರಂತೆ ಬಟಾಬಯಲು

ಚಿಗುರಿ ಅರಳುವ ಮುನ್ನ
ಅರಳಿದ ನೋಟ
ಚೈತ್ರ ಚೈತ್ರಗಳು ಕಳೆದುಹೋದರೂ
ಎಲ್ಲೋ ನೋಡಿದ ನೆನಪು!
ಖಾಲಿ ಹಾಳೆಯ ತುಂಬಾ
ಗುರುತು ಸಿಗದ
ಖಾಲಿ ನೋಟಗಳು
ವಸಂತ ಸರಿದು ಹೋಗುತ್ತಿದೆ
ಬದುಕು ಕೂಡಾ ಸರಿದು ಹೋಗುತ್ತಿದೆ
ಆದರೆ,
ಇತಿಹಾಸದ ಬೇರುಗಳು
ಬೇರುಬಿಟ್ಟಿರುತ್ತವೆ ಗಟ್ಟಿಯಾಗಿ ಸ್ಮೃತಿಪಟಲದೊಳಗೆ.....

ನಗುವ ಮಲ್ಲಿಗೆಘಮ್ಮೆಂದು
ಅರಳುವ ಪಾರಿಜಾತದ ಹೂವು
ಪಟಪಟನೆ ಉದುರುವ ಮಾತಿನ
ಸ್ವಾತಿ ಮಳೆ ಹನಿಯೇ?
ಕ್ಷಣಿಕ.....
ಯೋಚನೆಯ ಸುಳಿಯಲ್ಲಿ
ಕರಗಿ ಹೋಗುತ್ತದೆ
ನೆನಪಿನಾಳದ ಸ್ಮೃತಿಪಟಲದೊಳಗೆ.......

ಮನಸು ತುಂಬಿಕೊಂಡರೆ.....

ಗೋಡೆಗಳ ಒಳಗೆ
ಗೋಡೆಗಳಾಚೆ ಹೊರಗೆ
ಕೈ, ಕಣ್ಣುಗಳಿಗೆ
ತೆರೆದು ಬಿದ್ದಿದೆ
ಬಯಲು ಆಗಸ!
ಎಷ್ಟೊಂದು ಪದಗಳು ಒಳ ಹೊರಗೆ
ತುಂಬಿಕೊಳ್ಳಲು ಮನಸು

ಕೈಗೆಟುಕುವುದು ಕಂಗಳಿಗೆ ಬೇಡ
ಕಣ್ಣುಗಳಿಗೆ ಕಂಡಿದ್ದು
ಕೈಗೆ ನಿಲುಕದು
ಅತ್ತಿತ್ತ ಹುಡುಕುವ
ಕೈ ಕಣ್ಣುಗಳಿಗೆ
ಹೃದಯ ಕದ ತೆರೆಯದು
ಅದರ ಬಡಿತವೇ ಬೇರೆ!

ಬಳ್ಳಿ ಬಾಡದಹಾಗೆ ನೋಡಿಕೊಳ್ಳುವ
ಲಯದ ಬಾಳೊಮ್ಮೆ
ಭಾವದ ಆಘಾತಕ್ಕೆ
ಲಯ ತಪ್ಪಿಸಿ ನಿಂತರೆ....
ಬಳ್ಳಿ ಬೇರು ಕಿತ್ತಂತೆ!
ಹಾಗಾಗದಂತೆ,
ಕಂಗಳು ಹೊರಡುವ ವೇಗದೊಂದಿಗೆ
ಕೈ ಸ್ಪರ್ಧೆಗಿಳಿಯದೆ
ಅಡಗಿರುವ ಮನಸಿನ ಓಟಕ್ಕೂ
ಕೈ ಜೋಡಿಸದೆ ಇದ್ದು
ಮನಸು ತುಂಬಿಕೊಂಡರೆ
ಉದ್ದಾಗದಿದ್ದರೂ ಕೈ, ಕಾಲು
ರೆಕ್ಕೆ ಮೂಡಿ ನನಸಾಗುವುದು
ಕನಸು ಪುಟ್ಟ ಗೂಡೊಳಗೇ..!