Monday, April 15, 2013

ತೈಲ ನಿಕ್ಷೇಪ


ವರುಷ ಕಳೆದದ್ದು
ಗೊತ್ತಾಗಲೇ ಇಲ್ಲ
ನಿರರ್ಥಕವಾಗಿ ಕಳೆದದ್ದು
ಈಗ ಲಕ್ಷಕ್ಕೆ ಬಂತು
ದೇಹಕ್ಕಾಯಿತು ವಯಸ್ಸು
ಮನಸ್ಸಿನ್ನೂ ಎಳಸು
ಉತ್ಸವದಲ್ಲಿ ಪಾಲ್ಗೊಂಡ
ರಂಗು ರಂಗಿನ ಗಾಳಿಪಟಗಳ ಹಾರಾಟ
ಬಣ್ಣ ಬಣ್ಣದ ಕನಸಿನೊಡೆ
ಮನದ ತುಂಬ
ಇಂದು ಅರಿವಿಗೆ ಬಂತು
ಕೆಲಸಗಳು ನೂರೆಂಟು
ನಡು ನೀರಿನಲ್ಲಿ , ದಡ ದೂರದಲ್ಲಿ
ಹಾಡು ಇನ್ನೂ ಪಲ್ಲವಿ
ಬರೆಯಬೇಕಾಗಿದೆ ನುಡಿಗಳ
ನೂರು ಭಾವ ಬಿತ್ತಿ
ಮೂಡಿದೆ ಬರಿಯ ಹಂದರ
ತುಂಬಬೇಕಿದೆ ಅದರೊಳಗೆ ಜೀವನ
ಸೂರ್ಯ ರಶ್ಮಿಯ ಬಣ್ಣಗಳ
ಜೀವ ಜೀವಗಳ
ಎದೆಯ ಬಾಗಿಲ ತಟ್ಟಿ
ಸುರಿಸಬೇಕಿದೆ ಪ್ರೀತಿಯ
ಕ್ರಮಿಸಬೇಕಿದೆ ಮೈಲು ದೂರ
ದೃಷ್ಟಿ ನೆಟ್ಟಿದೆ ದೂರದಲಿ
ಹೆಜ್ಜೆ ದಣಿದಿದೆ ಸೋತು
ಇಂದು ಅರಿವಿಗೆ ಬಂತು
ಎಣ್ಣೆ ಹನಿದಿದೆ
ಮರಳು ಸೋರಿದೆ
ಹುಡುಕುತಿದೆ ಮನಸು
ಕಡಲ ದಂಡೆಯಲ್ಲೊಂದು
ತೈಲ ನಿಕ್ಷೇಪ...!

Thursday, April 11, 2013

ಭಾವನೆಗೂ ಮೀರಿದ ಮಾತು...!

ಚುಮು ಚುಮು ಮುಂಜಾವಿನ
ಬೇಲಿ ಬದಿಯ ಹೂಗಳ ಮೇಲೆ
ಬಿದ್ದ ಮಂಜು ಹನಿಗೆ
ಅವಿತಿಟ್ಟುಕೊಳ್ಳಲಾಗದ ತೀಕ್ಷ್ಣ ಅನುಭವ
ನಾಳೆಗಳ ನಿರೀಕ್ಷೆಯಲ್ಲಿ ಬದುಕು ಸವೆಸುವ
ಕಣ್ಣಿನಾಳದ ಭಾವನೆಗೂ ಮೀರಿದ
ಮೌನ ಮಾತು

ಫುಟ್ ಪಾತ್ ನ ಮೇಲೆ ಬದುಕು ಸವೆಸುವ
ಹೂತುಂಬಿದ ಬುಟ್ಟಿ ಹೊತ್ತು ಮಾರುವ
ಹರಿದ ಬಟ್ಟೆ ತೊಟ್ಟ
ಹುಡುಗಿಯ ಬಯಲಾಟ
ಅಂತರಾಳದಲ್ಲೇನೋ ಹುಡುಕಾಟ
ಹರಿದ ಚಿಂದಿ ಬಟ್ಟೆಯ ಒಳಗಿನ ದನಿ
ಬೆಳಕಿಗೆ ಕರಗಿದ ಇಬ್ಬನಿ
ಭವಿಷ್ಯದ ಕಾತರತೆಯ ಕಣ್ಣಭಾವ
ತೆರೆಗೆ ಸರಿದ ಇರುಳಿನಲ್ಲಿ
ಹದಿ ಹರೆಯ ಕಾಮಕ್ಕೆ ತುತ್ತಾದ
ಹುಡುಗಿಯ ನಾಡಿನಿಡಿತದ ಏರಿಳಿತದಲ್ಲಿ
ಉತ್ತರಿಸಲಾಗದ ಪ್ರಶ್ನೆ
ಎದುರಿಸಬೇಕಾದ ಗಳಿಗೆ
ಸಾಯಲೇ..? ಬದುಕಲೇ..?
ಎನ್ನುವ ದ್ವಂದ್ವದಲ್ಲಿ
ಜಾರಿದ ಕಣ್ಣ ಹನಿಗಳು...

ಇಳೆಮುಗಿಲ ಸಂಬಂಧ
ಇಳೆಗೆ ಇಳಿದ ಮಳೆಯ ಅನುಬಂಧ
ಹಸಿರಲ್ಲೊಮ್ಮೆ ಉಕ್ಕಿದ ರಸ
ಕೋಗಿಲೆಯ ಇಂಚರಕ್ಕೆ ವಸಂತನ ಸರಸ
ಸೃಷ್ಟಿಯಲ್ಲಿ ಅರ್ಥವಾಗದ
ಅನನ್ಯ ಚೇತನ ನಿತ್ಯನೂತನ
ಭಾವನೆಗೂ ಮೀರಿದ ಮಾತು...!

Wednesday, April 10, 2013

ಚೈತ್ರದಲಿ


ಮೂಡಣದ ಮರೆಯಲ್ಲಿ
ಹೊಂಬೆಳಕ ಮಳೆಯಲ್ಲಿ
ಭಾಸ್ಕರನ ಯುಗರಶ್ಮಿಗಳು
ಚೈತ್ರ ಬಟ್ಟೆಯ ತೊಟ್ಟು
ಜಗದ ಪದತಲದಾಚೆ ಮೈ ಚೆಲ್ಲಿದೆ.

ಹರುಷದ ಹಸಿರು
ಕೊಂಬೆಗಳನ್ನಪ್ಪಿ ಬಂದಾಗ
ಆಕಾಶದೆತ್ತರದ ಬಯಕೆಗಳ ಕನಸುಗಳು
ಚಿಲಿಪಿಲಿಸಿ ರೆಕ್ಕೆ ಚಾಮರ ಬೀಸಿ
ಮುಗುಳು ನಗೆ ಸೂಸಿ
ನಗೆ ಬಟ್ಟಲೊಳಗೆ ಚುಂಚು ತೂರಿ
ಹೀರಿಕೊಳ್ಳುತ್ತವೆ ದಕ್ಕಿದಷ್ಟು ಹಾಲು...!

ಬಾನೆದೆಯ ಅಂಗಳದ
ಬಿರಿದ ನಕ್ಷತ್ರ ಮೊಗ್ಗಿನ ಹಂಬಲಕೆ
ಹಾರಿ ಹೊರಳುತ್ತವೆ
ಮಾಮರದ ಕೊಂಬೆಯಲಿ
ಮಲ್ಲಿಗೆಯ ಲತೆಯಲ್ಲಿ
ದುಂಬಿಗಳ ಝೇಂಕಾರ
ಕೋಗಿಲೆಗಳಾಲಾಪ ಸವಿಯುತ್ತಾ
ಸೃಷ್ಟಿ ಸುಧೆ ತಲೆದೂಗಿದೆ.

ಯುಗಾದಿಯ ಶುಭ ಚೈತ್ರದಲಿ
ಅಜ್ನಾತದ ಆಳಕ್ಕೆ ಬೇರುಗಳು ಬಿಟ್ಟು
ನೆಲಕಚ್ಚಿ ನಿಂತ ಗಿಡದ ಹಸಿರೊಡಲಲ್ಲಿ
ಮೊಗ್ಗರಳಿ ಹೂವಾಗಿ
ಬಂದ ಬಿರುಗಾಳಿ
ಚಳಿ ಮಳೆಯನುಂಡು
ಹುದುಗಿದ್ದ ಭೂರಮೆಯ
ಸುಂದರ ಕವಿತೆಗಳು ಬಿರಿಯುತ್ತವೆ...!!

ಅರುಣೋದಯ

ಏಳು ,ಎದ್ದೇಳು
ನಿದ್ದೆಗಣ್ಣನು ತೆರೆದೊಮ್ಮೆ ನೋಡು
ಹೊಸ ಶತಮಾನದ
ಅರುಣೋದಯವಾಗಿದೆ ಇಂದು...!

ಮೂಡಣದಲ್ಲಿ ಉಷೆ
ಮೂಡಿ ಬರುತಿಹಳು
ಕೆಂಬಣ್ಣದ ಓಕುಳಿಯ ಚೆಲ್ಲಿ
ಹೂಬನಗಳೆಲ್ಲಾ
ಕಾದು ನಿಂತಿಹವು ಇಂದು
ರಂಗು ರಂಗಿನ ಉಡುಗೆಯಲ್ಲಿ

ಹಕ್ಕಿಗಳೆಲ್ಲ ಹಾಡುತಿಹವು
ಸುಪ್ರಭಾತ ಇನಿದನಿಯಲಿಂದು
ಪುಷ್ಪವೃಷ್ಟಿಗೈಯುತಿಹವು ತರುಲತೆಗಳೆಲ್ಲ
ತಲೆಬಾಗಿ ನಿಂದು
ಕಾಲನ ಪಯಣದಲಿ
ಹೊಸ ಹೆಜ್ಜೆಯ ಪ್ರಾರಂಭ
ಮಾತು ಮಾತಿಗೆ ನಿಲುಕದ
ಸೃಷ್ಟಿಯ ಸೊಬಗಿನ ಸಂಭ್ರಮ..!
ಚರಾಚರಗಳಲ್ಲಿ ಹರ್ಷದ
ಹೊನಲುಕ್ಕಿ ಹರಿಯಲಿ
ಹೊಸ ವರ್ಷದ ಆಗಮನ
ಸರ್ವರಿಗೂ ಸಂತಸವ ನೀಡಲಿ....!!

ಮತ್ತೆ ಬಂದಿದೆ ಎಲ್ಲರಿಗು ಮುದ ತರುವ ಈ ಉಗಾದಿ ..... on ಕನ್ನಡ ಬ್ಲಾಗರ್ಸ್
ನನ್ನ ಅಚ್ಚು ಮೆಚ್ಚಿನ ನಿಮಗೆಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳು..., ಬೇವು ಬೆಲ್ಲದಂತೆ ಇನ್ನು ಮುಂದೆ ನಮ್ಮ ತನು-ಮನವುಗಳಿಗೆ ನವ ಚೇತನ ತರಲೆಂದು ಹಾರೈಸುವೆ..,

Monday, April 8, 2013

ಹೊಸಭಾವ

ಹಚ್ಚಿಟ್ಟ ಹಣತೆಯಿಂದ
ಬೆಳಗಿದ ಬೆಳಕಿನ ಕಿರಣಕೆ
ಅಂಧಕಾರವು ಮರೆಯಾಗಿ
ಅಲೆಅಲೆಯಾಗಿ ಬಿಡುತ್ತಿತ್ತು
ಚೈತ್ರ ಮಾಸದ ಸುವಾಸನೆ
ನೀರಿನ ಒಳ ಗರ್ಭದಿಂದ
ಮೇಲೇರಿತು ಸುಂದರವಾದ
ಅರಳಿದ ತಾವರೆ ಹೂ
ಪೊರೆ ಪೊರೆಯಾಗಿದ್ದ ನೀಲಾಗಸದಲ್ಲಿ
ರಂಗು ರಂಗಿನ ಹೊಂಬಣ್ಣದ
ಸೂರ್ಯನ ನವ ಕಿರಣಗಳು
ನನ್ನ ಮೈ ಸೋಕಿತು
ಮೆಲ್ಲನೆ ಮುತ್ತಿನಂತೆ
ಮಂಪರು ನಿದ್ದೆಯಲ್ಲಿರುವಾಗಲೇ
ನೆನಪಾಯಿತು ಇಂದು ಯುಗಾದಿ ..!!

ಎಲ್ಲೆಲ್ಲೂ ಚೈತ್ರದ ಹಸಿರು
ಏನು ಸೊಬಗು!
ಮೊಗ್ಗು ಹೂವಾಗಿ
ಹೂ ಹಣ್ಣಾಗುವ
ಸೋಜಿಗದ ಕಲೆ
ಅರಳಿದ ಮನವೊಂದು
ಹಾಡಿತು ಹೊಸರಾಗ
ಚೈತ್ರದಿಂದ ಪುಳಕಗೊಂಡು
ಹೊಳೆಯಿತು ಬಾಳಿಗೆ
ಹೊಸ ಭಾವ.

Thursday, April 4, 2013

ಮುಂಗಾರಿನ ಮಳೆ

ಮುಂಗಾರಿನ ಮಳೆ
-----------------
ಗುಡುಗಿಲ್ಲ , ಮಿಂಚಿಲ್ಲ......
ಆಗಸದ ತುಂಬಾ ಮುತ್ತಿರುವ
ಕಪ್ಪನೆಯ ಮೋಡಗಳಿಂದ
ಸದ್ದಿಲ್ಲದೆ ಸುರಿದ ಧೋ ಧೋ
ಮಳೆಗೆ ಮೈತೊಳೆದಳು
ಈ ಇಳೆ
ಅಳಿಸಿ ಹಾಕಿದಳು
ಎಲ್ಲಾ ಕಲ್ಮಷ ಕೊಳೆ..!

ಮುತ್ತಿನಾ ಹನಿಯಂತೆ
ಮುಸಲ ಧಾರೆ ಧಾರೆ
ವೈಶಾಖದ ಸುಡು ಬಿಸಿಲಿಗೆ
ಕಾದು ಕೆಂಪಾದ ನೆಲಕ್ಕೆ ಬಿದ್ದು
ದಾಹ ತೀರಿ ತಂಪುಂಡ ಧರಿತ್ರಿ
ಮುತ್ತಂತೆ ನಕ್ಕಳು
ಹಸಿರ ಹೂನಗೆ ಚೆಲ್ಲಿ !

ಬಿದ್ದ ಮುಂಗಾರಿನ ಮಳೆಗೆ
ಹದವಾಯಿತು ನೆಲ
ಹರ್ಷಗೊಂಡಿತು ರೈತ ಸಂಕುಲ
ಕಳೆಯಿತು ಮನದ ವ್ಯಾಕುಲ
ಹಳ್ಳ , ಕೊಳ್ಳ , ಕೆರೆಕಟ್ಟೆಗಳೆಲ್ಲಾ
ತುಂಬಿ ಹರಿಯಿತು ಕಲರವಿಸಿ

ಸುತ್ತಲೂ ಚೆಲ್ಲಿಹುದು ಚೆಲುವು
ಎತ್ತೆತ್ತ ನೋಡಿದರೂ ಕಾಣುವುದು ಒಲವು
ಶ್ರಾವಣದ ಸಂಭ್ರಮವೇ ತುಂಬಿದೆ
ಮುಂಗಾರಿನ ಮಳೆಯಲ್ಲಿ
ಭರವಸೆಯ ಮಳೆಬಿಲ್ಲು
ಮೂಡುವುದು ಮನದಲ್ಲಿ.

Wednesday, April 3, 2013

ಮಾಗಿಯ ಚಳಿಯಲ್ಲಿ

ಮಾಗಿಯ ಚಳಿಯಲ್ಲಿ
-------------------------
ಹಗಲೆಲ್ಲಾ ದಹಿದಹಿಸುವ
ಬಿಸಿಲಿನ ಬೇಗೆ
ರಾತ್ರಿ ಕರುಳು ಕತ್ತರಿಸುವ
ಚಳಿಯ ಅಲಗು
ಹೊರಗಿರುವ ಶೀತಲ ಮಾರುತದ
ಮೇಲೆ ನರ್ತಿಸುವ ಇಬ್ಬನಿ ಸೋನೆ
ಹಣ್ಣಾಗಿ ಹನಿಯಂತುದುರುವ ಹಸಿರು
ಕೊಂಬೆ ಕೊಂಬೆಗಳ ನಡುವೆ
ಸಿಕ್ಕಿಕೊಂಡ ಉಸಿರು
ಮಡುಗಟ್ಟಿ ನೀರು ಘನವಾಗಿ
ಬೀಳುವ ಹನಿಹನಿ ಹಿಮ

ಒಳಗರಳುವ ದಳವೂ ಮುದುರಿ ಮೊಗ್ಗಾಗಿ
ಎದ್ದ ಗೋಡೆಗಳೂ ಬಿದ್ದು ಬಯಲಾಗಿ
ಹಾಸಿದ ಹಾಸಿಗೆಯೂ ಚುಚ್ಚುವ ಮುಉಳ್ಳಾಗಿ
ಹೊದ್ದ ಹೊದಿಕೆಯೂ ತಣ್ಣನೆಯ ರಾಶಿಯಾಗಿ
ಈ ಮಾಗಿಯ ಚಳಿಯಲ್ಲಿ ಸಿಕ್ಕಿಕೊಂಡವರಿಗೆ
ಉಸಿರಾಡಲು ಬೆಚ್ಚನೆಯ ತಾಣವೆಲ್ಲಿ...?
ರಕ್ಷಣೆ ಎಲ್ಲಿ...?
ಅದೇ ಪ್ರಿಯತಮೆಯ ಒಡಲು
ಮಧುರ ಮಡಿಲು
ಬಿಸಿ ನೆತ್ತರ ಕಡಲು !
ಅಲೆಗಳೆದ್ದ ಮಧುರಾಧರಗಳಲ್ಲಿಳಿದು
ಕಾದ ಮೈ ಕಾವಲಿಯ ಮೇಲುರುಳಿ
ಕಣಿವೆ ಕುಲುಮೆಯಲರಳಿ
ಕಾದು ಕಡು ಕೆಂಪಾಗಿ ಹೊರಳಿ
ಕುಡಿಯೊಡೆದು ಸೊಂಪಾಗಿ ತೆವಳಿ
ಹದವಾದ ನೆಲದಲ್ಲಿ
ಹಚ್ಚನೆಯ ಹಸಿರಾಗಿ
ಚಿಮ್ಮಿ ಹೊಮ್ಮುವೆ
ಮಾಗಿಯ ಚಳಿಗೆ...!

ಹೆಜ್ಜೆಗಳು,


 
ಹೆಜ್ಜೆಗಳು,
------------------

ನಿಶೆಯ ನೀರವತೆಯಲ್ಲಿ
ಮನ ಜಾಗೃತಗೊಂಡು
ಕಣ್ತೆರೆದು ನೋಡಿದಾಗ
ನಿನ್ನ ಮೃದು ಮೃಧುರ ಹೆಜ್ಜೆಗಳಲ್ಲಿನ
ಗೆಜ್ಜೆಗಳ ಸದ್ದು!
ಬೆಚ್ಚಿ ಬಿದ್ದರೆ
ನಾಲ್ಕು ಹನಿ ಕಣ್ಣೀರು ಮಿಡಿದು
ಜೋಗುಳ ಹಾಡುತ್ತವೆ

ಈಗ,
ಬೆಳದಿಂಗಳ ರಾತ್ರಿಯಲ್ಲಿ
ಮತ್ತೊಮ್ಮೆ ಕಣ್ಣರಳಿಸಿಜ್ಜೆಗಳ್
ಮೆಲ್ಲನೆ ಶಬ್ದಿಸುವ
ಗೆಜ್ಜೆಗಳ ಸದ್ದಾಲಿಸಿ
ನಿನ್ನ ಹೆಜ್ಜೆಗಳ ಹಿಂಬಾಲಿಸಲು ತವಕಿಸುತ್ತೇನೆ

ಹಾಲು ಚೆಲ್ಲಿದ
ಬೆಳದಿಂಗಳ ರಾತ್ರಿಯಲ್ಲಿ
ರಸ್ತೆಯನ್ನೆಲ್ಲಾ ಕೆದಕಿ
ಹೆಜ್ಜೆ ಗುರುತು ಕಾಣದೆ
ಕಂಗಾಲಾಗಿ ದಿಗಿಲುಗೊಂಡಾಗ.....
ದೂರದಲ್ಲೆಲ್ಲೋ ನೀ ನಡೆವ
ಹೆಜ್ಜೆ ಸಪ್ಪಳಕೆ ಕಣ್ಮುಚ್ಚುತ್ತೇನೆ
ನಾಳೆಯ ನಿಶೆಯ ನೀರವತೆಯಲ್ಲಿ
ಮತ್ತೆ ನೀ ಇಟ್ಟ
ಹೆಜ್ಜೆಗಳ ಎಣಿಸಲು.....

ಪ್ರಾರ್ಥನೆ

ಪ್ರಾರ್ಥನೆ
-------------
ಆಷಾಢದಲ್ಲೊಂದು ದಿನ
ಇದ್ದಕ್ಕಿದ್ದಂತೆ ನೀನು ಬಂದೆ
ಇಳಿ ಸಂಜೆ ಮಳೆಯಂತೆ
ತುಂಬಿ ಹರಿವ ಹೊಳೆ
ಬಳಿ ಸಾರಿ ಬಂದಂತೆ

ತೆವಳುತ್ತಾ ತೆವಳುತ್ತಾ
ಬೇರು, ಜೀವಜಲ ಹುಡುಕುತ್ತಾ
ತೊರೆ ದೂರವಿದ್ದರೂ
ತಂಪು ಹೊತ್ತು
ಬರುವ ತಂಗಾಳಿಯಂತೆ

ಮುಂಜಾನೆಯ ಎಳೆಬಿಸಿಲಿಗೆ
ಮೊಗ್ಗರಳಿ ಲಾಸ್ಯದಲಿ ಅರಳಿದ
ಹೂಗಳ ಪರಿಮಳಿದ ಭಾರಕ್ಕೆ
ಬೀಸುವ ಗಾಳಿಯಲ್ಲಿ
ಸುಗಂಧ ಪಲ್ಲವಿಸಿದಂತೆ
ಹಾಗೇ ತೆರೆದಿಟ್ಟ
ಕಿಟಕಿ, ಬಾಗಿಲು
ಹೇಳಲಿಲ್ಲ, ಕೇಳಲಿಲ್ಲ
ಒಳಗೆ ಇಟ್ಟಾಗಿದೆ ಹೆಜ್ಜೆ
ಇನ್ನೂ ಸ್ವಲ್ಪ ಹೊತ್ತು
ಇರಬಾರದೇ ಹೀಗೆ.....?!

ಸುಮ್ಮನೆ ನಿಂತಂತಿದೆ ಮರ

ಸುಮ್ಮನೆ ನಿಂತಂತಿದೆ ಮರ
------------------------------

ಅಲ್ಲೇ, ಆ ಬಯಲ ದಾರಿಗುಂಟ
ಸುಮ್ಮನೆ ನಿಂತಂತಿದೆ ಮರ
ಕಂದು ತೊಗಟೆಯ ಬಟ್ಟೆ ತೊಟ್ಟು
ಹಸಿರ ತೇರ ಹೊತ್ತು
ಮೈ ತುಂಬಾ ಕೆಂಡ ಸಂಪಿಗೆ
ದಿನಾ ನೋಡಿದರೆ
ಹೀಗೆಯೇ ಇದೆ
ಸದಾ ಎನ್ನುವಂತೆ ಬೆಳೆದು

ಭೂಮಿಯ ಆಳಕ್ಕೆ ಬೇರುಬಿಟ್ಟ
ಒಡಲನಾಳದಿಂದ ನೀರ ಹೀರಿ
ಕಾಂಡ, ಕಾಲುವೆಯಲಿ ಹರಿದು
ಮೇಲೇರಿ, ಟೊಂಗೆ ಟಿಸಿಲುಗಳ
ಕವಲು ದಾರಿಯಲಿ ಒಯ್ದು
ಇಡೀ ಮರವೇ ಹಸಿಹಸಿರಾಗಿದೆ

ಬಿಸಿಲು ಹೀರಿ ಹೂನಗೆ ನಕ್ಕು
ಕನಸ ಬೀಜವ ಕಟ್ಟಿ
ಎಲ್ಲೆಲ್ಲೂ ಕಳಿಸುತಿದೆ
ಹಣ್ಣಿನ ತಂತ್ರದಲಿ
ಬೀಸಿ ಬಂದ ಮೆಲುಗಾಳಿಗೆ
ನಲಿದು ಪಿಸು ದನಿಯಲಿ ಉಲಿದು
ನೆಲದ ಬೇರನು ಹಿಡಿದು
ಆಗಸದ ಕಡೆ ನೋಡಿ
ನಿರುಮ್ಮಳವಾಗಿ ಇದೆ
ಹೂವಿನಂತೆ ಬಾಡಿಹೋಗುವೆನೆಂಬುದ ಮರೆತು.

ಮನಸು ತುಂಬಿಕೊಂಡರೆ.....

ಮನಸು ತುಂಬಿಕೊಂಡರೆ.....
---------------------------
ಗೋಡೆಗಳ ಒಳಗೆ
ಗೋಡೆಗಳಾಚೆ ಹೊರಗೆ
ಕೈ, ಕಣ್ಣುಗಳಿಗೆ
ತೆರೆದು ಬಿದ್ದಿದೆ
ಬಯಲು ಆಗಸ!
ಎಷ್ಟೊಂದು ಪದಗಳು ಒಳ ಹೊರಗೆ
ತುಂಬಿಕೊಳ್ಳಲು ಮನಸು

ಕೈಗೆಟುಕುವುದು ಕಂಗಳಿಗೆ ಬೇಡ
ಕಣ್ಣುಗಳಿಗೆ ಕಂಡಿದ್ದು
ಕೈಗೆ ನಿಲುಕದು
ಅತ್ತಿತ್ತ ಹುಡುಕುವ
ಕೈ ಕಣ್ಣುಗಳಿಗೆ
ಹೃದಯ ಕದ ತೆರೆಯದು
ಅದರ ಬಡಿತವೇ ಬೇರೆ!

ಬಳ್ಳಿ ಬಾಡದಹಾಗೆ ನೋಡಿಕೊಳ್ಳುವ
ಲಯದ ಬಾಳೊಮ್ಮೆ
ಭಾವದ ಆಘಾತಕ್ಕೆ
ಲಯ ತಪ್ಪಿಸಿ ನಿಂತರೆ....
ಬಳ್ಳಿ ಬೇರು ಕಿತ್ತಂತೆ!
ಹಾಗಾಗದಂತೆ,
ಕಂಗಳು ಹೊರಡುವ ವೇಗದೊಂದಿಗೆ
ಕೈ ಸ್ಪರ್ಧೆಗಿಳಿಯದೆ
ಅಡಗಿರುವ ಮನಸಿನ ಓಟಕ್ಕೂ
ಕೈ ಜೋಡಿಸದೆ ಇದ್ದು
ಮನಸು ತುಂಬಿಕೊಂಡರೆ
ಉದ್ದಾಗದಿದ್ದರೂ ಕೈ, ಕಾಲು
ರೆಕ್ಕೆ ಮೂಡಿ ನನಸಾಗುವುದು
ಕನಸು ಪುಟ್ಟ ಗೂಡೊಳಗೇ..!

ನೆನಪು

ನೆನಪು
---------
ನಾ ನೆಟ್ಟು ಬೆಳೆಸಿದ
ಗಿಡದ ತುಂಬಾ ಅರಳಿದ
ಘಮಘಮಿಸುವ ಹೂಗಳ
ಪ್ರತಿ ಪಕಳೆಗಳ ಮೇಲೆ
ಬಿದ್ದ ಮುಂಜಾವಿನ
ಮಂಜಿನ ಹನಿಗಳು
ಹೊಳೆಯುತ್ತವೆ ಸೂರ್ಯ
ರೇಶ್ಮೆಯ ಹೊಂಗಿರಣಗಳ
ಲಾಸ್ಯ ಹೊರಹೊಮ್ಮುವ
ಪ್ರಭೆಯಲ್ಲಿ ನಿನ್ನ
ರಾಗಾನುರಾಗ ರಂಜಿತ
ಕೋಮಲ ಮುಖಾರವಿಂದದಿಂದ
ಚಿಮ್ಮುವ ನಸು ನಗೆಯ
ಪ್ರತಿಫಲದ ನೆನಪು.
ಈ ಗಿಡದ ಹಸಿರು ಬಾಡಿ
ಮೆಲ್ಲನೆ ಗಾಳಿಗೆ
ತಲೆ ಬಾಗಿದಾಗ
ಪಟಪಟನೆ ಉದುರುವ
ಪಾರಿಜಾತದ ಹೂಗಳು
ನೆಲತುಂಬಾ ಹಾಸುಹಾಸು
ಬಿದ್ದ ಹಾಗೆ,
ನಿನ್ನ ಹಾಲ್ಗೆನ್ನೆಯ ಮೇಲೆ
ಬಿದ್ದು ಉರುಳಿ ಬೀಳುವ
ಕಣ್ಣೀರ ಮುತ್ತುಗಳ ನೆನಪು.......

ಎಲ್ಲಿ ಹೋದೆ ಸಖಿ.....?

ಎಲ್ಲಿ ಹೋದೆ ಸಖಿ.....?
-------------------------
ಎಲ್ಲಿ ಹೋದೆ ಸಖಿ
ಕತ್ತಲೆಯ ಮರೆಯಲ್ಲಿ
ನನ್ನ ಬಂಧಿಸಿ ಮುತ್ತಿಕ್ಕಿ
ಮಧುರ ನೆನಪನುಣಿಸಿ...?

ಅಲ್ಲೇ ಇದೆ ನಿನ್ನ ಹೆಜ್ಜೆ ಗುರುತು
ನನ್ನ ಕನಸಿನ ಹಾಗೆ ಅಚ್ಚೊತ್ತಿದೆ
ಆಗಸದ ತುಂಬಾ
ಮುತ್ತುತ್ತಿದೆ ಕರಿಮೋಡ
ಆವರಿಸುತಿದೆ ಕತ್ತಲೆ ಆಳವಾಗಿ
ಇಂಥ ರಾತ್ರಿಯಲ್ಲೂ
ಎಂಥ ಬೇಗೆ..!
ಈ ರಾತ್ರಿಯಲ್ಲಿ ನಾನೊಂಟಿಯಾಗಿರಲಾರೆ
ಸಖಿ ಬರಲಾರೆಯಾ ಮತ್ತೆ ?

ಮೂಡುತಿದೆ ಬೆವರಹನಿ ಹಣೆಯ ತುಂಬಾ
ಎದೆಯೊಳಗೆ ನಡುಕ ಯಾಕೋ ಗೊತ್ತಿಲ್ಲ
ಆರಬಾರದು ಅಲ್ಲಿ ಉರಿಯುತ್ತಿರುವ ದೀಪ
ನೀ ಬರುವ ತನಕ

ಎಲ್ಲಿ ಹೋದೆ ಸಖಿ
ಕತ್ತಲೆಯ ಮರೆಯಲ್ಲಿ
ನನ್ನ ಬಂಧಿಸಿ ಮುತ್ತಿಕ್ಕಿ
ಮಧುರ ನೆನಪನುಣಿಸಿ.....??

ನಿನಗಿಲ್ಲ ಗೆಳತಿ ಬಾಳು

ನಿನಗಿಲ್ಲ ಗೆಳತಿ ಬಾಳು
--------------------

ಗೆಳತಿ , ನೀನೊಬ್ಬಳೇ ಇಲ್ಲಿ
ಕೂತರೆ , ನಿಂತರೆ , ನಕ್ಕರೆ
ಸಮಾಜ ಜನರ
ಕಣ್ಣಿಗೆ ಆಹಾರವಾಗುವೆ
ನಿನ್ನ ನೋವು ವೇದನೆಯರಿತು
ಒಂದೆರಡು ಸಮಾಧಾನದ
ಮಾತನಾಡುವ ಜನರು ಎಷ್ಟಿದ್ದಾರೆ....?
ಅಲ್ಲೊಬ್ಬ , ಇಲ್ಲೊಬ್ಬ
ಶ್ರೀಮಂತ ಹೃದಯದವರು ಇರಬಹುದು !
ನಿನ್ನ ಬದುಕಿಗೆ
ದ್ವಂದ್ವಾರ್ಥ ಕಲ್ಪಿಸಿ
ಬದುಕಿಗೆ ರಂಗು ರಂಗಿನ
ಬಣ್ಣ ಕಟ್ಟಿ
ಸುದ್ದಿ ಭಿತ್ತರಿಸಿ
ತಾವು ಸಂಭಾವಿತರೆಂದು ಭೀಗುತ್ತ
ಅಲ್ಲಲ್ಲಿ ಭಾಷಣ ಬಿಗಿದು
ನಿನ್ನ ಸ್ವಾತಂತ್ರ್ಯಕ್ಕೆ
ಭಂಗ ತರುವ
ಇವರ ನಡುವೆ
ನಿನಗಿಲ್ಲ ಗೆಳತಿ ಬಾಳು..!!

ಬಾಳಿನ ಇತಿಹಾಸ

ಬಾಳಿನ ಇತಿಹಾಸ
---------------------
ಕತ್ತಲೆಯ ಮೂಲೆಯಡಿಯಲಿ
ಆಸೆಯ ಕಂಗಳಲ್ಲಿ
ಬೆಳಕಿಗಾಗಿ ನಿರಂತರ ನಿರೀಕ್ಷಿಸುತ್ತಾ
ಕಷ್ಟ , ಸುಖಗಳ ಸರಮಾಲೆಯಡಿಯಲಿ
ಸಾಗುವ ಬದುಕಿನಲ್ಲಿ
ನಿರಂತರ ಆಸೆಯ
ಅದಮ್ಯ ಬಯಕೆ......
ಬಡತನದ ಕಷ್ಟವನು ಅನುಭವಿಸುತ್ತಿದ್ದರೂ
ಸುಖದ ಹಂಬಲ......
ಕತ್ತಲೆಯ ಅನಂತ ನೀಲಾಕಾಶದಲಿ
ಮಿನುಗುವ ಅಸಂಖ್ಯ
ನಕ್ಷತ್ರದ ಬೆಳಕು
ಬೆಳಗಲು ಏನೂ ಸಾಲದು.
ಅದೇ ರೀತಿ
ಬಾಳಿನಲಿ ಕಂಡ
ಸಣ್ಣ ಆಸೆಯ ಕೊಡಿಯನ್ನೇ ನೆಚ್ಚಿ
ನಿರಾಶೆಯ ಮುಸುಕಿನಲಿ
ಹೊಳೆಯುವ ಕಪ್ಪು
ಕಣ್ಣೆರಡುಗಳು ಹೇಳುತ್ತವೆ
ಬಾಳಿನ ಇತಿಹಾಸವನ್ನ.

ಮತ್ತೇಕೆ ಕಾಡುತಿದೆ....?

ಮತ್ತೇಕೆ ಕಾಡುತಿದೆ....?
---------------------
ದಟ್ಟ ಕಾಡಿನುದ್ದಕ್ಕೂ ನೆಟ್ಟ
ಸಾಲು ಸಾಲು ಮರಗಳ
ನೆತ್ತಿ ಮುತ್ತಿಡುವ ನೀಲಬಾನು
ಕಂಗೊಳಿಸುತಿಹುದು ಅರಳು ಮಲ್ಲಿಗೆಯ
ನಗು ನಗುವಿನ ಹೂ ಕಮಾನು
ಸಾಗರದ ತೆರೆಯ
ತೆರೆಮರೆಯ ಆಟದಲಿ
ಮುಚ್ಚಾಲೆಯಾಡಿ ಚುಕ್ಕೆ
ಎದ್ದೆದ್ದು ಕುಣಿದು ಕುಪ್ಪಳಿಸಿದ್ದು
ತೀರದೆಡೆ ಸೇರುವವು
ಮಳಲು ತೆಕ್ಕೆ !

ಚೆಂದಿರನ ಬೆಳದಿಂಗಳ
ಹಾಸಿಗೆ ಹಾಸಿರುವ ಪೂರ್ಣ ರಾತ್ರಿ
ಮಳಲು ಮಂಚದೆಡೆ
ನೂತನದ ಅಭಿಸಾರ !
ಸಮ್ಮೋಹನ ಧಾತ್ರಿ ತಂಗಾಳಿಯೊಡನೆ
ಸರಸ ಸಲ್ಲಾಪ ಸಾಕು ಬಿಡು
ಸಾಕು ಆ ಕಡಲ ಸೆಳೆತ !
ನಾ ಕೇಳಲಾರೆ ನಿನ್ನೊಂಟಿದನಿ ಮಿಡಿತ
ಸೊಬಗಿನಡೆಗೆಯ ತುಡಿತ
ನೆಲದೊಡಲ ಬಗೆದು
ಮೇಲೇರಿ ಮುಗಿಲೇರಿ
ಅಲೆಯುತ್ತಿರುವ ಮಧುರ ನೆನಪ
ಮತ್ತೇಕೆ ಕರೆ ಕರೆದು ಕಾಡುತಿದೆ
ಸುಮ್ಮನೆಯ ಸೊಬಗಿನಡೆಗೆ

ಹಗಲು-ಕತ್ತಲೆಗಳ ನಡುವೆ

ಹಗಲು-ಕತ್ತಲೆಗಳ ನಡುವೆ
---------------------------

ಹಗಲು ಕತ್ತಲೆಗಳ ನಡುವೆ
ಒಂದೊಂದೇ ಬಿಚ್ಚಿಕೊಳ್ಳುವ
ಸುರುಳಿ ಕನಸುಗಳು
ಬಾಳ ಪಥದಲ್ಲಿ
ಹಾದು ಹೋಗುವಾಗ
ಬಯಕೆಗಳನ್ನು ಬಚ್ಚಿಟ್ಟಿರುವೆನೇ
ಎಂದು ಹಿಂದಿರುಗಿನೋಡಿ
ಅದರ ನೆರಳೂ ಕೂಡ ಕಾಣದೆ
ನನ್ನೀ ಬಯಕೆಗಳು
ಭೂಮಿಯಲ್ಲಿ ಹುದುಗಿಹೋದ
ನಿಧಿ ನಿಕ್ಷೇಪಗಳು....!

ಬಯಕೆ ಎಂದಾದರೊಂದಿನ
ಗರ್ಭದಿಂದ ಹೊರಬರಬಹುದೆಂಬ
ವಿಶ್ವಾಸ ಈಗಿಲ್ಲ..!
ನಮಗಿರುವ,
ಇಂದು- ನಾಳಿನ ಬಯಕೆಗಳು
ಹಗಲು- ಇರುಳುಗಳಿಲ್ಲದೇ
ಒಂದೇ ಸಮನೆ
ಸಾಗುತಿದೆ ಎಂದೆಂದೂ......
ಸರಿಯುತ್ತಿರುವ ದಿನಗಳನ್ನೇ ಎಣಿಸುತ್ತಾ
ಅದರ ಸಂಗಡ
ನೆನಪಿನಾಳದಲ್ಲಿ ಹುದುಗಿಹೋಗುತ್ತೇನೆ.

ಇದು ಸತ್ಯ....!

ಇದು ಸತ್ಯ....!
-----------------
ಯುದ್ಧವೇ ಕ್ಷತ್ರಿಯ
ಧರ್ಮವೆಂದರಿತ ಅಭಿಮನ್ಯು
ಕೌರವರ ಮೋಸಕ್ಕೆ ಸಿಕ್ಕಿ
ಚಕ್ರವ್ಯೂಹ ಭೇದಿಸಿ
ಹೊರಬರಲಾರದೆ ಸತ್ತು ಅಮರನಾದ..!!
ಮೌಲ್ಯಮಾಪನದೊಳಗೆ ಸಿಕ್ಕಿ
ಚರಿತ್ರ ಹೀನರಾದವರ
ಸಾವು ಅಮರವೇ...?

ಹಗಲು- ರಾತ್ರಿ
ಮಳೆ - ಬಿಸಿಲೆನ್ನದೆ
ಜೀವ ತೇದು,
ಮಣ್ಣಲ್ಲಿ ಬೆರೆತು
ಉಸಿರಾಡುವಾಗ ಸಿಕ್ಕುವುದೇನು..?
ಬೆವರು ಸುರಿಸಿ
ಕಲ್ಲಿನ ಜಲ್ಲಿಯನು ಒಡೆಯುತ್ತಾ
ಆಳೆತ್ತರಕ್ಕೆ ಕಟ್ಟಿದ ಮಹಲು
ಕೊಟ್ಟೀತೇ ನೆರಳು..?

ಸೂಕ್ಷ್ಮವಾಗಿ ನೇಯ್ದ ಬಟ್ಟೆ ಇದ್ದರೂ
ತಪ್ಪದು ಚಿಂದಿ ಬಟ್ಟೆಯ ಸಹವಾಸ...!
ಕಸುಬೇ ದೇವರೆಂದು ನಂಬಿಸಿ
ಗೋಣು ಕೊಯ್ಯುವ ಸಮಾಜದ
ದುಷ್ಟ ಶಕ್ತಿಗಳ ಮುಖವಾಡಗಳನ್ನು
ಹೊರಗೆಡವಿದಾಗಲೇ ಬದುಕುತ್ತೇವೆ ನಾವು.

ಮೊರೆ

ಮೊರೆ
-------------
ಮೇಲೆ ನೀಲಾಕಾಶ
ಕೆಳಗೆ ಭೂಮಿಯಲ್ಲಿ ಹೂತು
ಮೇಲೆ ಬರಲಾರದೇ
ಮತ್ತೂ ಮತ್ತೂ ತನ್ನಾಳಕ್ಕೇ
ಎಳೆದುಕೊಳ್ಳುತ್ತಿರುವ ಭೂಮಿ
ಇನ್ನೂ ಕ್ಷೀಣವಾಗಿರದ
ನನ್ನ ಎದೆಬಡಿತದ
ಸದ್ದಿಗೆ ಕಿವಿಗೊಟ್ಟು
ನನಗೆ ಸಹಾಯ ಮಾಡಲಾರಿರಾ?

ಅಂಗಳದ ಸುತ್ತ
ಕುಲುಕುಲು ನೀನಾದ
ಅಳುವ ಮಗುವಿನ ಸಾಂತ್ವನ
ಬಾನಾಕಾಶದಲ್ಲಿ ಹರಡಿರುವ
ಕಪ್ಪು ಮೋಡ
ಸಾಗರದ ಗಂಭೀರ ಮೊರೆತ
ತನ್ನೊಡಳೊಳಗೆ ಎಳೆದುಕೊಳ್ಳುವ
ಪರಿಧಿಯಿಂದ ಹೊರಜಗತ್ತಿಗೆ
ತರಲು ಪ್ರಯತ್ನಿಸಿ
ಸಾಯುವ ಹಸಿ ಜೀವಕ್ಕೆ
ಹೊಸ ನೀರು ಕೊಟ್ಟು ಬೆಳೆಸಿ
ಹೊಸ ಉಸಿರು ಕೊಟ್ಟು ಕಾಪಾಡಿ.

ಮಾಗಿಯ ಚಳಿಯಲ್ಲಿ

ಮಾಗಿಯ ಚಳಿಯಲ್ಲಿ
-------------------------
ಹಗಲೆಲ್ಲಾ ದಹಿದಹಿಸುವ
ಬಿಸಿಲಿನ ಬೇಗೆ
ರಾತ್ರಿ ಕರುಳು ಕತ್ತರಿಸುವ
ಚಳಿಯ ಅಲಗು
ಹೊರಗಿರುವ ಶೀತಲ ಮಾರುತದ
ಮೇಲೆ ನರ್ತಿಸುವ ಇಬ್ಬನಿ ಸೋನೆ
ಹಣ್ಣಾಗಿ ಹನಿಯಂತುದುರುವ ಹಸಿರು
ಕೊಂಬೆ ಕೊಂಬೆಗಳ ನಡುವೆ
ಸಿಕ್ಕಿಕೊಂಡ ಉಸಿರು
ಮಡುಗಟ್ಟಿ ನೀರು ಘನವಾಗಿ
ಬೀಳುವ ಹನಿಹನಿ ಹಿಮ

ಒಳಗರಳುವ ದಳವೂ ಮುದುರಿ ಮೊಗ್ಗಾಗಿ
ಎದ್ದ ಗೋಡೆಗಳೂ ಬಿದ್ದು ಬಯಲಾಗಿ
ಹಾಸಿದ ಹಾಸಿಗೆಯೂ ಚುಚ್ಚುವ ಮುಉಳ್ಳಾಗಿ
ಹೊದ್ದ ಹೊದಿಕೆಯೂ ತಣ್ಣನೆಯ ರಾಶಿಯಾಗಿ
ಈ ಮಾಗಿಯ ಚಳಿಯಲ್ಲಿ ಸಿಕ್ಕಿಕೊಂಡವರಿಗೆ
ಉಸಿರಾಡಲು ಬೆಚ್ಚನೆಯ ತಾಣವೆಲ್ಲಿ...?
ರಕ್ಷಣೆ ಎಲ್ಲಿ...?
ಅದೇ ಪ್ರಿಯತಮೆಯ ಒಡಲು
ಮಧುರ ಮಡಿಲು
ಬಿಸಿ ನೆತ್ತರ ಕಡಲು !
ಅಲೆಗಳೆದ್ದ ಮಧುರಾಧರಗಳಲ್ಲಿಳಿದು
ಕಾದ ಮೈ ಕಾವಲಿಯ ಮೇಲುರುಳಿ
ಕಣಿವೆ ಕುಲುಮೆಯಲರಳಿ
ಕಾದು ಕಡು ಕೆಂಪಾಗಿ ಹೊರಳಿ
ಕುಡಿಯೊಡೆದು ಸೊಂಪಾಗಿ ತೆವಳಿ
ಹದವಾದ ನೆಲದಲ್ಲಿ
ಹಚ್ಚನೆಯ ಹಸಿರಾಗಿ
ಚಿಮ್ಮಿ ಹೊಮ್ಮುವೆ
ಮಾಗಿಯ ಚಳಿಗೆ...!

ನಿಗೂಢ ರಾತ್ರಿಯಲಿ

ನಿಗೂಢ ರಾತ್ರಿಯಲಿ
----------------------
ನಿಗೂಢ ರಾತ್ರಿಯಲಿ ಹೊಳೆಯುವುದು
ಆಗಸದಲ್ಲಿ ನಕ್ಷತ್ರಗಳು
ಇದ್ದೂ ಇಲ್ಲದಂತಿರುತ್ತವೆ
ಸುಮ್ಮನೆ ದಿನದ ಬೆಳಕಿನಲ್ಲಿ

ರಾತ್ರಿಯ ಕತ್ತಲಲ್ಲಿ
ಬಿದ್ದ ಕನಸುಗಳೆಲ್ಲ
ಹೂವಾಗಿ ಅರಳಿ
ಮಂಜು ಮುಸುಕಿದ ಮುಂಜಾವಿನಲಿ
ಕವಿತೆಗಳಾಗಿ ಘಮಘಮಿಸುವುದು
ಬೆಳಕಿನಲ್ಲಿ ಕಂಡಿದ್ದೆಲ್ಲ ಅರ್ಥವಾಗುವುದಿಲ್ಲ
ಮುಂಜಾನೆಗೊಂದು ಬಣ್ಣ.....
ಸಂಜೆಗೆ ಮತ್ತೊಂದು.....

ರಾತ್ರಿಯ ಕಪ್ಪು ಬದಲಾಗುವುದಿಲ್ಲ
ಕ್ಷಣಕ್ಕೊಂದು ಬಣ್ಣ
ಕರಾಳ ಕತ್ತಲಲ್ಲಿ
ಜೀವ ಮೊಳಕೆಯೊಡೆಯುತ್ತದೆ

ಬಾಳಿನ ಇತಿಹಾಸ

ಬಾಳಿನ ಇತಿಹಾಸ
-------------------
ಕತ್ತಲೆಯ ಮೊಲೆಯಡಿಯಲಿ
ಆಸೆಯ ಕಂಗಳಲ್ಲಿ
ಬೆಳಕಿಗಾಗಿ ನಿರಂತರ ನಿರೀಕ್ಷಿಸುತ್ತಾ
ಕಷ್ಟ ಸುಖಗಳ ಸರಮಾಲೆಯಡಿಯಲಿ
ಸಾಗುವ ಬದುಕಿನಲ್ಲಿ ; ನಿರಂತರ......
ಆಸೆಯ ಅದಮ್ಯ ಬಯಕೆ
ಬಡತನದ ಕಷ್ಟವನು ಅನುಭವಿಸುತ್ತಿದ್ದರೂ
ಸುಖದ ಹಂಬಲ
ಕತ್ತಲೆಯ ಅನಂತ ನೀಲಾಕಾಶದಲಿ
ಮಿನುಗುವ ಅಸಂಖ್ಯ
ನಕ್ಷತ್ರದ ಬೆಳಕು
ಬೆಳಗಲು ಏನೂ ಸಾಲದು
ಅದೇ ರೀತಿ
ಬಾಳಿನಲಿ ಕಂಡ
ಸಣ್ಣ ಆಸೆಯ ಕೊಡಿಯನ್ನೇ ನೆಚ್ಚಿ
ನಿರಾಶೆಯ ಮುಸುಕಿನಲಿ
ಹೊಳೆಯುವ ಕಪ್ಪು
ಕಣ್ಣೆರಡುಗಳು ಹೇಳುತ್ತವೆ
ಬಾಳಿನ ಇತಿಹಾಸವನ್ನ.

ಆಹ್ವಾನ

ಆಹ್ವಾನ
--------
ಒಮ್ಮೊಮ್ಮೆ ಮಂಜು ಮುಸುಕಿನ
ಮುಂಜಾವಿನಲಿ ತಂಗಾಳಿ ಬೀಸುವಾಗ
ಮನದೊಳಗೆ ಚಿಗುರಿದ ಕವಿತೆ
ಮಾಯವಾಗಿ ವಿದಾಯ ಹೇಳುವ
ಕನಸುಗಳು ಬೀಳುತ್ತವೆ.

ಸುಡು ಬಿಸಿಲ
ಸೂರ್ಯನ ಕಿರಣಕ್ಕೆ
ಹೃದಯ ಮರುಟಿ
ಭಾವನೆ ಸ್ತಬ್ಧವಾದಾಗ
ನನ್ನ ಪ್ರೀತಿಯ ಪ್ರೇಮ
ಹೊತ್ತಿ ಉರಿಯುತ್ತದೆ.

ಮುಸ್ಸಂಜೆ ಹೊತ್ತಿನಲ್ಲಿ
ಪಶ್ಚಿಮದ ದಿಗಂತದಲ್ಲಿ
ಸೂರ್ಯನ ಕೆಂಬಣ್ಣ
ಸಾಗರದ ತುಂಬಾ ಚೆಲ್ಲುತ್ತಿರುವಾಗ
ಹೊರ ಹೊಮ್ಮುವ ಜುಳುಜುಳು ನೀನಾದಗಳು
ನನ್ನೊಳಗಿನ ಭಾವನೆಗಳಿಗೆ
ಲಯಬದ್ಧವಾದ ಶೃತಿಮಿಡಿಯುವ
ನೆನಪುಗಳು ಕಾಡುತ್ತವೆ.

ರಾತ್ರಿಯ ನೀರವತೆಯಲ್ಲಿ
ನನ್ನೀ ಮನದ ತೊಳಲಾಟಕ್ಕೆ
ಸಾಂತ್ವನ ಹೇಳಿ
ಮರುದಿನದ ಮುಂಜಾವಿಗೆ
ಕಾತರದ ಆಹ್ವಾನವೀಯುತ್ತದೆ.

ಮುಂಜಾವಿನ ಹಾಡು

ಕೆಂದಾವರೆಯ ನಿನ್ನ ಮುದ್ದು
ಮುಖ ಕಂಡು ಕುಣಿದೆಡೆಗೆ
ಹುಣ್ಣಿಮೆ ಚಂದ್ರ ಕಂಡ ಸಾಗರದಂತೆ
ಮೈ ಉಬ್ಬಿ ಕುಲುಕುತ್ತಾ ಬಂದವಳೇ
ಈಗ ಎಲ್ಲಿ---?

ಪಶ್ಚಿಮದ ಕಡಲು
ಎತ್ತರಿಸಿ ಬಂಡೆಗಪ್ಪಳಿಸುವಂತೆ
ನಿನ್ನ ಕಣ್ಣು ಕುಂಚವಾಡಿಸಿ
ನನ್ನೆದೆಯ ಮಡಿಲಲ್ಲಿ
ಬೆಳೆದ ಒಲುಮೆಯ ಚಿತ್ರ
ಹಚ್ಚ ಹಸಿರಾಗಿ ಬೆಳೆದಿರುವಾಗ
ಎಲ್ಲಿ ಹೋದೆ
ನನ್ನೆದೆಯ ಬತ್ತಿಸಿ,,,?

ಭೂಮಿಯ ಉತ್ಖಸಿಸಿ
ಹೊರ ತಂದ ಎಣ್ಣೆಯಂತೆ
ಎತ್ತಿತಂದ ಮುತ್ತು ಮಾಣಿಕ್ಯದಿಂದ
ನಿನ್ನ ಸಿಂಗರಿಸಿ
ಬದುಕು ದೋಣಿಯೇರಿ
ದೂರ ಹೋಗುವ ಮುನ್ನ
ಹೃದಯ ತೆರೆದು ಕರಗಿಹೋದೆ
ಮುಂಜಾವಿನ ಮಧುರ ನೀನಾದವಾದೆ.

ಮೊಗ್ಗು ಮಾಲೆಯಾಗುವ ಹಾಗೆ

ಮೊಗ್ಗು ಮಾಲೆಯಾಗುವ ಹಾಗೆ
---------------------------------------
ಬಿಳಿ ಹಾಳೆಯ ತುಂಬಾ ಹರವಿಟ್ಟೆ
ಹೊಸ ಅರ್ಥಗಳ
ಹೊಸ ಶಬ್ದಗಳ
ಪದ ಪುಂಜಗಳನ್ನು
ಆದರೆ ಯಾಕೋ
ಅದು ಪದ್ಯವಾಗಲಿಲ್ಲ
ಅದಕ್ಕೆ ರಾಗವಿರಲಿಲ್ಲ , ಲಯವಿರಲಿಲ್ಲ
ಇಂಪಾದ ಕಂಠವಷ್ಟೇ ಇತ್ತು
ಕವಿತೆ ಹಾಡಾಗಲು
ಸ್ವರ ನಭಿಯಿಂದುಲಿದು ಬರಬೇಕು !

ಬರ್ರೆಂದು ಸುರಿದ
ಜಡಿ ಮಳೆಯ ಹನಿ
ಟಪಟಪನೆ ಶಬ್ದಿಸುತ್ತಾ
ಮನೆಯ ಮಾಡಿನಿಂದಿಳಿದು
ಅತ್ತಿತ್ತ ಕೊರಕಲಿನಲಿ ಹರಿದು
ಬೇಲಿಯಂಚಿನ ಗಿಡಕೆ
ಜೀವ ತುಂಬುವ ಹಾಗೆ
ಮುಳ್ಳುಕಳ್ಳಿಯ ಮೇಲೂ
ಎದೆ ಹನಿ ಚಿಮುಕಿಸಿ
ಪ್ರೀತಿ ಬೆಳೆಯಬೇಕು
ಹಿಂಡು ಹಿಂಡಾಗಿ ಹಾರಿ
ಬೆಟ್ಟ ಗುಡ್ಡವ ಸುತ್ತಿ
ಹುಲ್ಲು ಚಪ್ಪರಿಯಿಂದ
ಒಂದೊಂದೇ ಕಡ್ಡಿಹೆಕ್ಕಿ
ಹಕ್ಕಿ ಗೂಡುಕಟ್ಟುವ ಪರಿಯಲ್ಲಿ
ನಾವೂ ಕಟ್ಟಬೇಕು
ನಮ್ಮೆದೆಯಲ್ಲೊಂದು ಮಹಲು ಮನೆ.

ಹುಡುಗನೊಳಗಿನ ಪ್ರೀತಿ
ನುಡಿ ಮುತ್ತಾಗುವ ತನಕ
ಕಲ್ಪನೆಯ ಕಂಬಳಿ ಹೊದ್ದು
ಮುಂಜಾವಿನ ಮಂಜುಹನಿಗೆ ಮೈಯೊಡ್ಡಿ
ಅರೆಬಿರಿದ ಮಲ್ಲಿಗೆ ಕೊಯ್ದು
ಮಾಲೆಯಾಗಿ ಮೊಗ್ಗರಳಿ ನಗುವ ಪರಿಗೆ
ಅವಳ ಕಣ್ಣಂಚಿನಲ್ಲಿ
ಹೊಸ ಕನಸು ಚಿಗುರುವಂತೆ
ಕಟ್ಟಬೇಕು ನಾವು ಪ್ರೀತಿ ಮಂದಿರವನ್ನು.

ಆಸೆಯ ಕೊಡಿ....

ಆಸೆಯ ಕೊಡಿ....
----------------
ನೀರವ ವಾತಾವರಣದಲ್ಲಿ
ದೂರದಿಂದ ಕೇಳಿಬರುವ
ಲಯಬದ್ಧ ಸಂಗೀತ
ಕೋಗಿಲೆಯ ಇಂಪಾದ ಇಂಚರಗಳು
ನನ್ನ ಮನವ ಛಿದ್ರಗೊಳಿಸಲಾರವು
ಕಾರಣ ಅವುಗಳು ನನ್ನ
ನಲ್ಲೆಯ ಹೊತ್ತು ತರಲಾರವು.

ಹತ್ತಿರದಲ್ಲಿ ನಡೆಯುವ
ರಂಗ ಸಜ್ಜಿನ ಗೆಜ್ಜೆ ಕುಣಿತ
ಹಕ್ಕಿಗಳ ಪಟ ಪಟ ಸದ್ದು
ಲಲ್ಲೆಗರೆಯುವ ತಾಯಿ
ಇವುಗಳು ನನ್ನ ಎಚ್ಚರಗೊಳಿಸಲಾರವು
ಯಾಕೆಂದರೆ ಇವು ನನ್ನ
ನಲ್ಲೆಯಹೊತ್ತು ತರಲಾರವು.

ಹಚ್ಚ ಹಸಿರಿನ ಸಿರಿತನದಲಿ
ಚಿಗುರಿನಿಂತ ಮಾಮರ
ವಸಂತ ಅನುಭವಿಸಿ
ಕೈಬೀಸಿ ಕರೆದಾಗ ,
ನವಿಲು ಗರಿಬಿಚ್ಚಿ ಕುಣಿದಂತೆ
ನಾನು ಕುಣಿಯುವುದಿಲ್ಲ
ಏಕೆಂದರೆ , ಇದಾವುದರ
ಪರಿವೆ ಇಲ್ಲದೇ ನನ್ನ ನಲ್ಲೆಯ
ಬರುವಿಕೆಗಾಗಿ ಕಾಯುತ್ತಿದ್ದೇನೆ.

ಆಕಾಶದಲ್ಲಿ ಕಪ್ಪು ಹಗುರ ಕರಗಿ
ಸಾವಕಾಶವಾಗಿ ಬೆಳ್ಳಿ ಮೂಡಿದಂತೆ
ಮನದಾಳದಲ್ಲಿ ಅಡಗಿರುವ
ಯಾವುದೋ ಒಂದು ಆಸೆಯ ಕೊಡಿ
ನಿಮಿರಿ ನಿಲ್ಲುತ್ತದೆ
ನಲ್ಲೆಯ ಬರುವಿಕೆಗಾಗಿ......
----------------
ನೀರವ ವಾತಾವರಣದಲ್ಲಿ
ದೂರದಿಂದ ಕೇಳಿಬರುವ
ಲಯಬದ್ಧ ಸಂಗೀತ
ಕೋಗಿಲೆಯ ಇಂಪಾದ ಇಂಚರಗಳು
ನನ್ನ ಮನವ ಛಿದ್ರಗೊಳಿಸಲಾರವು
ಕಾರಣ ಅವುಗಳು ನನ್ನ
ನಲ್ಲೆಯ ಹೊತ್ತು ತರಲಾರವು.

ಹತ್ತಿರದಲ್ಲಿ ನಡೆಯುವ
ರಂಗ ಸಜ್ಜಿನ ಗೆಜ್ಜೆ ಕುಣಿತ
ಹಕ್ಕಿಗಳ ಪಟ ಪಟ ಸದ್ದು
ಲಲ್ಲೆಗರೆಯುವ ತಾಯಿ
ಇವುಗಳು ನನ್ನ ಎಚ್ಚರಗೊಳಿಸಲಾರವು
ಯಾಕೆಂದರೆ ಇವು ನನ್ನ
ನಲ್ಲೆಯಹೊತ್ತು ತರಲಾರವು.

ಹಚ್ಚ ಹಸಿರಿನ ಸಿರಿತನದಲಿ
ಚಿಗುರಿನಿಂತ ಮಾಮರ
ವಸಂತ ಅನುಭವಿಸಿ
ಕೈಬೀಸಿ ಕರೆದಾಗ ,
ನವಿಲು ಗರಿಬಿಚ್ಚಿ ಕುಣಿದಂತೆ
ನಾನು ಕುಣಿಯುವುದಿಲ್ಲ
ಏಕೆಂದರೆ , ಇದಾವುದರ
ಪರಿವೆ ಇಲ್ಲದೇ ನನ್ನ ನಲ್ಲೆಯ
ಬರುವಿಕೆಗಾಗಿ ಕಾಯುತ್ತಿದ್ದೇನೆ.

ಆಕಾಶದಲ್ಲಿ ಕಪ್ಪು ಹಗುರ ಕರಗಿ
ಸಾವಕಾಶವಾಗಿ ಬೆಳ್ಳಿ ಮೂಡಿದಂತೆ
ಮನದಾಳದಲ್ಲಿ ಅಡಗಿರುವ
ಯಾವುದೋ ಒಂದು ಆಸೆಯ ಕೊಡಿ
ನಿಮಿರಿ ನಿಲ್ಲುತ್ತದೆ
ನಲ್ಲೆಯ ಬರುವಿಕೆಗಾಗಿ......

Tuesday, April 2, 2013

ಸ್ಮೃತಿ ಪಟಲದೊಳಗೆ

ಸ್ಮೃತಿ ಪಟಲದೊಳಗೆ
-------------------
ಮಂಜು ಮುಸುಕಿದ ಮುಂಜಾವಿನಲಿ
ಬೆಳಕು ಚಿತ್ತಾರ
ಇನ್ನೂ ಮೂಡಿರದ ಸಮಯ
ಕೊರಳ ಇಂಪು
ಇನ್ನು ಹೊರಡುವಾಗಲೇ
ಅರಳು ಮರಳು
ಸ್ಮೃತಿಪಟಲದೊಳಗೆ ಎಲ್ಲಾ ಖಾಲಿ ಖಾಲಿ
ಎಲ್ಲಾ ಕಳಕೊಂಡವರಂತೆ ಬಟಾಬಯಲು

ಚಿಗುರಿ ಅರಳುವ ಮುನ್ನ
ಅರಳಿದ ನೋಟ
ಚೈತ್ರ ಚೈತ್ರಗಳು ಕಳೆದುಹೋದರೂ
ಎಲ್ಲೋ ನೋಡಿದ ನೆನಪು!
ಖಾಲಿ ಹಾಳೆಯ ತುಂಬಾ
ಗುರುತು ಸಿಗದ
ಖಾಲಿ ನೋಟಗಳು
ವಸಂತ ಸರಿದು ಹೋಗುತ್ತಿದೆ
ಬದುಕು ಕೂಡಾ ಸರಿದು ಹೋಗುತ್ತಿದೆ
ಆದರೆ,
ಇತಿಹಾಸದ ಬೇರುಗಳು
ಬೇರುಬಿಟ್ಟಿರುತ್ತವೆ ಗಟ್ಟಿಯಾಗಿ ಸ್ಮೃತಿಪಟಲದೊಳಗೆ.....

ನಗುವ ಮಲ್ಲಿಗೆಘಮ್ಮೆಂದು
ಅರಳುವ ಪಾರಿಜಾತದ ಹೂವು
ಪಟಪಟನೆ ಉದುರುವ ಮಾತಿನ
ಸ್ವಾತಿ ಮಳೆ ಹನಿಯೇ?
ಕ್ಷಣಿಕ.....
ಯೋಚನೆಯ ಸುಳಿಯಲ್ಲಿ
ಕರಗಿ ಹೋಗುತ್ತದೆ
ನೆನಪಿನಾಳದ ಸ್ಮೃತಿಪಟಲದೊಳಗೆ.......

ಕ್ಷಮಯಾ ಧರಿತ್ರಿ

ಕ್ಷಮಯಾ ಧರಿತ್ರಿ
----------------
ಕಂಡಿರಾ ನೀವು
ನಮ್ಮೂರ ಉದ್ಯಾನದಲಿ
ಅರಳಿ ತಲೆ ಎತ್ತಿನಿಂತ ಗಿಡವ........?
ವಸಂತ ಬಂತೆಂದರೆ
ಅದಕ್ಕೆ ಎಲ್ಲಿಲ್ಲದ ಸಂಭ್ರಮ!
ಚಿಗುರು ಚಿಗುರಿ, ಹಸಿರೊಡೆದು
ಮೈ ವಿಕಸಿಸಿ
ಕೊಂಬೆ ಕೊಂಬೆಗಳಲ್ಲೂ
ಹಣ್ಣು ತೂಗಿ
ತೊಯ್ದಾಡುತ್ತದೆ ಲಜ್ಜೆಯಿಂದ.

ನೆರಳಾರಿಸಿ ಬಂದವರು ಸುಮ್ಮನಿರದೇ
ಹಣ್ಣು ಕಿತ್ತು, ಹರಿದು ಮುಕ್ಕುತ್ತಾ
ಬಯಲಾಗಿಸುತ್ತಾ ಮರೆಯಾದಾಗ
ನನ್ನ ಮನದಲಿ
ಓ! ತಾಯಿ
ನಿನ್ನದೇ ನೆನಪು
ನೀ ಕೂಡಾ ಹಸಿರಾದೆ, ಬಸಿರಾದೆ
ಸೃಷ್ಟಿಸಿದೆ ಹೂಕಾಯಿಗಳ
ಅವು ಚಿಗುರಲೆಂದು ಬರಿದಾಗಿಸಿದೆ.

ಬಂದವರು ಕಿತ್ತು ತಿಂದರೂ
ನೀ ಸುಮ್ಮನಾದೆ
ನಿನ್ನನ್ನೇ ಮರೆತರು
ಆದರೂ,
ನಿನ್ನ ತನ ಮಾಯಲಿಲ್ಲ
ನಿನ್ನ ಕಡಿದಷ್ಟೂ ಚಿಗುರುತ್ತೀಯಾ
ಜೀವರಾಶಿಗೆ ಅಶ್ರಯ ನೀಡುತ್ತೀಯಾ
ಮನಕೆ ಆನಂದ ನೀಡುತ್ತೀಯಾ
ನೀನು ಸಾಮಾನ್ಯಳಲ್ಲ
ನೀನು ’ಕ್ಷಮಯಾ ಧರಿತ್ರಿ’ !!

ನಿವೇದನೆ

ನಿವೇದನೆ
-------------
ಕೊರಗದಿರು ಗೆಳತಿ
ನಿನ್ನಷ್ಟಕ್ಕೆ ನೀನೇ
ಕರಗದು ಕಷ್ಟಗಳು
ತಮ್ಮಷ್ಟಕ್ಕೆ ತಾವೇ
ನಿನ್ನೊಡನೆ ಜೊತೆಯಾಗಿ ನಾನಿಲ್ಲವೇನು..?
ಸಂತಸದಂತೆ ನೋವನ್ನೂ ಹಂಚಿಕೊಳ್ಳಲಾರನೇ?

ನಿನ್ನೆ ಸರಿದ ಕ್ಷಣಗಳು
ಬರದೆಂದು ಮುಂದೆ
ನಾಳೆಯನು ಹತ್ತಿರಕ್ಕೆ
ಕರೆಯಲಾರೆವು ಇಂದೇ
ಇವುಗಳ ನಡುವಿರುವ
ಇಂದು ಮಾತ್ರವೇ ನಮ್ಮದು.

ಶ್ರೀಮಂತಗೊಳಿಸೋಣ ಇತಿಹಾಸ
ಭವಿಷ್ಯವ ಮರೆತು
ಒಂಟಿಯೆಂಬ ಭಾವನೆ
ಬಿಟ್ಟುಬಿಡು ನೀನು
ಒಡನಾಡಿಯಾಗಿ ಸದಾ ನಾನಿರುವೆನಿನ್ನು.

ಸಂಜೆ ಸೊಬಗು

ಸಂಜೆ ಸೊಬಗು
---------------------
ಎಂದಿನಂತೆ ಕೆಂಪೆಡರಿದ
ಸೂರ್ಯನ ಕೆಂಬಣ್ಣ
ಪಸರಿಸಿದೆ ಪಶ್ಚಿಮದ
ಬಾನ ದಿಗಂತದಲ್ಲಿ.
ಇದಕ್ಕೆ ಸಾಕ್ಷಿಯೋ ಎಂಬಂತೆ
ಗೂಡು ಸೇರುವ ತವಕದಲಿ
ಚಿಲಿಪಿಲಿಗುಟ್ಟು ಹಾರುವ ಹಕ್ಕಿಗಳು ,
ಮೇಲಿಂದ ಮೇಲೆ
ಧರೆಗೆ ಅಪ್ಪಳಿಸುವ
ಸಮುದ್ರ ರಾಜ !
ಕೊರೆದಷ್ಟೂ ಉದ್ಭವಿಸುವ ಉಸುಕು
ಮುಗಿಯಲಾರದ ಅಕ್ಷಯ ಪಾತ್ರೆ.....!!
ಅಲ್ಲಲ್ಲಿ ಮೊಡಿಬಂದ
ಹೆಜ್ಜೆ ಗುರುತು
ಸೂರ್ಯ ಇಳಿದಂತೆ
ಮೊಡಿ ಬರುವ ನೆರಳು
ದಿನಚರಿಯಲ್ಲಿ ಬರೆಯುವ
ಒಂದು ಸಂಜೆ ಸೊಬಗು..!

ನೀರಿಗಾಗಿ ಕಾಯಬೇಕು

ನೀರಿಗಾಗಿ ಕಾಯಬೇಕು
--------------------------
ನೀರು ನೀರೆಂದು
ನಲ್ಲಿಯ ಮುಂದೆ ಕೂತರೆ
ನೀರು ಬಂದೀತೇ ..?
ಇಲ್ಲ , ಬರಲಿಲ್ಲ
ಬದಲು ಬಂದೀತು
ಒಂದಿಷ್ಟು ಕಣ್ಣೀರು !

ಎಷ್ಟು ದಿನ ಕಾಯಬಹುದು
ನೀರ ಹನಿಗಾಗಿ..?
ಬಾಯಾರಿ ಗಂಟಲು ಒಣಗುತಿದೆ
ಕಣ್ಣೀರು ಬತ್ತಿದೆ
ಒಡಲೊಳಗೆ ಹಸಿವಿನ
ಲವಾರಸ ತಳಮಳಿಸುತ್ತಿದೆ
ಹಿಮ ಕರಗಿ ನೀರಾಗುವುದನ್ನು.....
ನಮ್ಮ ಬಿಸಿಯುಸಿರು
ಕರಗಿ ತಂಪಾಗುವುದನ್ನು.......

ಆದರೂ ಕಾಯಬೇಕು
ಚಾತಕ ಪಕ್ಷಿಯಂತೆ
ಆಕಾಶದತ್ತ ನೇರದೃಷ್ಟಿ ಇಟ್ಟು
ಬಾರದ ನೀರಿಗಾಗಿ
ಕಾಯುತ್ತಲೇ ಇರಬೇಕು
ನೀರ ಹನಿ ಇಲ್ಲದಿದ್ದರೂ ಸರಿ ,
ಕನಸಿನಲ್ಲಿ ತೇಲಾಡುವ ನಾವು
ನೋವಿನ ನಿಟ್ಟುಸಿರ
ಹೃದಯದ ’ಫ್ರಿಜ್ ’ ನಲ್ಲಿ ಬೆಚ್ಚಗಿರಿಸಬೇಕು
ಯಾಕೆಂದರೆ ,
ನಾವು ಈ ಭೂಮಿಯಲ್ಲಿ
ಬದುಕಬೇಕಾದವರು ಅದಕ್ಕೇ ..!

ಪ್ರತೀಕ್ಷೆ

ಪ್ರತೀಕ್ಷೆ
----------------

ನೀರವ ವಾತಾವರಣದಲ್ಲಿ
ದೂರದಿಂದ ಕೇಳಿ ಬರುವ
ಲಯಬದ್ಧ ಸಂಗೀತ
ಕೋಗಿಲೆಯ ಇಂಪಾದ ಇಂಚರಗಳು
ನನ್ನ ಮನವ ಛಿದ್ರಗೊಳಿಸಲಾರವು
ಕಾರಣ ಅವುಗಳು ನನ್ನ ನಲ್ಲೆಯ
ಹೊತ್ತು ತರಲಾರವು

ಹತ್ತಿರದಲ್ಲಿ ನಡೆಯುವ
ರಂಗ ಸಜ್ಜಿನ ಗೆಜ್ಜೆ ಕುಣಿತ
ಹಕ್ಕಿಗಳ ಪಟಪಟ ಸದ್ದು
ಲಲ್ಲೆಗರೆಯುವ ತಾಯಿ
ಇವುಗಳು ನನ್ನ ಎಚ್ಚರಗೊಳಿಸಲಾರವು
ಯಾಕೆಂದರೆ , ಇವು ನನ್ನ ನಲ್ಲೆಯ
ಹೊತ್ತು ತರಲಾರವು

ಹಚ್ಚ ಹಸಿರಿನ ಸಿರಿತನದಲಿ
ಚಿಗುರಿ ನಿಂತ ಮಾಮರ
ವಸಂತ ಅನುಭವಿಸಿ
ಕೈ ಬೀಸಿ ಕರೆದಾಗ ,
ನವಿಲು ಗರಿಬಿಚ್ಚಿ ಕುಣಿದಂತೆ
ನಾನು ಕುಣಿಯುವುದಿಲ್ಲ
ಏಕೆಂದರೆ , ಇದಾವುದರ ಪರಿವೆ ಇಲ್ಲದೇ
ನನ್ನ ನಲ್ಲೆಯ ಬರುವಿಕೆಗಾಗಿ ಕಾಯುತ್ತಿದ್ದೇನೆ

ಆಕಾಶದಲ್ಲಿ ಕಪ್ಪು ಹಗುರ ಕರಗಿ
ಸಾವಕಾಶವಾಗಿ ಬೆಳ್ಳಿ ಮೂಡಿದಂತೆ
ಮನದಾಳದಲ್ಲಿ ಅಡಗಿರುವ
ಯಾವುದೋ ಒಂದು ಆಸೆಯ ಕೊಡಿ
ನಿಮಿರಿ ನಿಲ್ಲುತ್ತದೆ ನಲ್ಲೆಯ ಬರುವಿಕೆಗಾಗಿ.

ಕಾತರ

ಕಾತರ
-----------
ನೀರವ ವಾತಾವರಣದಲಿ
ಕಳೆದ ವಸಂತದಲಿ
ಮೊಗ್ಗರಳಿ ಹೂವಾಗಿ
ಸುತ್ತೆಲ್ಲಾ ತಂಪೆರಚಿದಂತೆ
ಬದುಕಿನ ನಿಗೂಢತೆಯನಳೆಯುವ
ಮೌನ ಹೊಸ ರೂಪ ತಾಳುತ್ತದೆ.

ಕಣ್ಣಲ್ಲಿ ಮಿಂಚುವ
ಹೊಸ ಭಾವ
ಅಂತರಾಳದಲ್ಲಿ ಮೂಡಿಬಂದ
ಕನಸು , ರೆಕ್ಕೆ ಪುಕ್ಕ ಕಟ್ಟಿ ವಿಹರಿಸುತ್ತದೆ.

ಚಿಗುರು ಮಾಮರದ ಮೇಲೆ
ಕೂತು ಕೂಗುವ ಕೋಗಿಲೆಯಂತೆ ಕೂಗಿ
ಬಣ್ಣದ ರಂಗು ಕಟ್ಟಿ ಹಾರಾಡುತ್ತಾಳೆ.

ಹೊಸ ಹೊಸ ರೂಪದ
ಹೊಸ ದಿಗಂತದಲಿ
ವಿಹರಿಸುತ್ತಾ ನಾಳಿನ ಸವಿ ನೆನಪಿಗಾಗಿ
ಕಾತರಿಸುತ್ತಾಳೆ.....

ಸಂಜೆ ಮಬ್ಬಿನಲಿ

ಸಂಜೆ ಮಬ್ಬಿನಲಿ
---------------
ಬದುಕಿನ ಹಂದರವ ನಿರ್ಮಿಸುತ್ತಲೇ
ಪರಕೀಯನಾಗಿಯೇ ಕರಗಿದ
ನನ್ನೀ ಬದುಕು.....
ನೆನಪುಗಳು ಸಾಯುವುದಿಲ್ಲ
ಭೂತಕಾಲದ ಘೋರಿ ಸೇರಿದ್ದರೂ
ಕುಳಿತುಕೊಂಡೇ ಇರುತ್ತವೆ
ಭೂತ ಪದರಿನಲಿ ಬೆಚ್ಚಗೆ

ಸಂಜೆ ಮಬ್ಬಿನಲಿ ಈಗ
ಹಿನ್ನೆಲೆಯ ಅಲೆಗಳು
ಮತ್ತೆ ಮತ್ತೆ ಹುಟ್ಟಿ ಅಳಿಯುತ್ತಾ
ಬಣ್ಣಗಳು ಕರಗಿ
ಸುಕ್ಕು ಮೂಡುವ ಕಾಲ!
ಸಾವಿನ ಹೊಸ್ತಿಲಲಿ
ಕೂತಿರುವ ನನಗೋ
ನಿರಂತರ ಪಯಣಕ್ಕಾಗಿ ತೆರೆದ
ಕೊನೆಯಿರದ ಇನ್ನಷ್ಟು ದಾರಿಗಳು

ಬದುಕಿನ ಮೆಟ್ಟಿಲಿನಲ್ಲಿ ಕುಳಿತು
ಎಣಿಸುತ್ತಿರುವೆ ಕಳೆದ ದಿನಗಳ
ಹಿಂದೆಲ್ಲಾ ಅದೆಂಥ ಕಾಲ!
ಪ್ರತಿ ವರ್ಷದ ಬೆಚ್ಚನೆಯ ಚಳಿಗಾಲ
ತುಂಬುವಸಂತದ ಹೊಂಗನಸು
ಗಾಳಿ ತುಂಬ ಹಕ್ಕಿಗಳ ಇಂಚರ
ಹಿತವಾದ ಸಂಜೆಗಳು!

ಎಲ್ಲಿ ಹೋಯಿತೋ?
ಕಾಲರಾಯ ಕಸಿದುಕೊಂಡ
ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ
ಈಗೇನುಳಿದಿದೆ...?
ಬರೀ , ಆ ನೆನಪಿನ ಪಳೆಯುಳಿಕೆ
ನಿತ್ಯ ಶಾಶ್ವತ!
ಹಂದರದ ತುಂಬ ತುಕ್ಕು ಹಿಡಿದ ಸರಪಳಿಗಳು
ಆಷಾಢದ ಗಾಳಿಯ ನಡುವೆ
ನಿಸರ್ಗದ ಕಣ್ಣು ಮುಚ್ಚಾಲೆ
ಹಸಿದ ಹೆಬ್ಬುಲಿಯಂತೆ
ವೈಶಾಖದ ರಣ ಬಿಸಿಲು
ಒಣಗಿ ಬತ್ತಿಹೋದ ಕಂಗಳಲ್ಲೀಗ
ಯಾವ ಸೂರ್ಯನೂ ಇಲ್ಲ!

ಬಿರುಕಡಲು

ಬಿರುಕಡಲು
----------
ದುಂಬಿ ಕುಳಿತ ಹೂದಳದ ಪುಳಕ
ಮೆಲುಗಾಳಿಗೆ ಮೆಲ್ಲನೆ ಅಲಗುವ
ಜುಳು ಜುಳು ಹರಿವ ನದಿಯ
ಅಲೆಗಳ ಹಾಗೆ ನವಿರು ಕಂಪನ
ನೀಲಿ ಬಾನಲ್ಲಿ ರೆಕ್ಕೆಬಿಚ್ಚಿ
ಹಾರುವ ಮನಸು
ಹಿಮಾಲಯ ಪರ್ವತದ
ತುದಿಯ ಮಂಜು ಕರಗಿ
ಬಿಳಿ ಹೊಗೆಯಾಗಿ
ಸುತ್ತೆಲ್ಲಾ ಹರಡುವಂತೆ ಹರುಷ!

ಧೋ ಧೋ ಹೊಯ್ಯುವ
ಬಿರುಮಳೆಗೆ
ತುಂಬಿ ಹರಿವ ಹೊಳೆ
ಯಾವುದು ಒಳಗೆ ?
ಯಾವುದು ಹೊರಗೆ ?
ನಿಲ್ಲದ ಕೊರಗು ಕೊನೆತನಕ

ಬೀಸಿ ಬರುವ ಬಿರುಗಾಳಿಗೊಡ್ಡಿದ
ದೀಪದ ಹಾಗೆ ಹೊಯ್ದಾಡುವ ಮನ
ಹುಟ್ಟಿನಲ್ಲಿ ಮುಲುಕಾಡುವ ರಾಗಗಳು
ಬಿರಿಯಲಾರದ ಮೊಗ್ಗುಗಳಂತೆ
ನೋವು ಮಿಡಿಯುವ ಎದೆಗೆ
ನಿರ್ಲಿಪ್ತತೆಯ ಸೆರಗು ಹೊದಿಸಿ
ನಿಶ್ಚಲವಾಗಿ ಬಿದ್ದಿರುವ ಮರಳುದಂಡೆಯನ್ನು
ಮೀರದ ಬಿರುಕಡಲು ನಾನು

ಹೂವಿಗೂ ನೋವಿದೆ