Wednesday, April 10, 2013

ಚೈತ್ರದಲಿ


ಮೂಡಣದ ಮರೆಯಲ್ಲಿ
ಹೊಂಬೆಳಕ ಮಳೆಯಲ್ಲಿ
ಭಾಸ್ಕರನ ಯುಗರಶ್ಮಿಗಳು
ಚೈತ್ರ ಬಟ್ಟೆಯ ತೊಟ್ಟು
ಜಗದ ಪದತಲದಾಚೆ ಮೈ ಚೆಲ್ಲಿದೆ.

ಹರುಷದ ಹಸಿರು
ಕೊಂಬೆಗಳನ್ನಪ್ಪಿ ಬಂದಾಗ
ಆಕಾಶದೆತ್ತರದ ಬಯಕೆಗಳ ಕನಸುಗಳು
ಚಿಲಿಪಿಲಿಸಿ ರೆಕ್ಕೆ ಚಾಮರ ಬೀಸಿ
ಮುಗುಳು ನಗೆ ಸೂಸಿ
ನಗೆ ಬಟ್ಟಲೊಳಗೆ ಚುಂಚು ತೂರಿ
ಹೀರಿಕೊಳ್ಳುತ್ತವೆ ದಕ್ಕಿದಷ್ಟು ಹಾಲು...!

ಬಾನೆದೆಯ ಅಂಗಳದ
ಬಿರಿದ ನಕ್ಷತ್ರ ಮೊಗ್ಗಿನ ಹಂಬಲಕೆ
ಹಾರಿ ಹೊರಳುತ್ತವೆ
ಮಾಮರದ ಕೊಂಬೆಯಲಿ
ಮಲ್ಲಿಗೆಯ ಲತೆಯಲ್ಲಿ
ದುಂಬಿಗಳ ಝೇಂಕಾರ
ಕೋಗಿಲೆಗಳಾಲಾಪ ಸವಿಯುತ್ತಾ
ಸೃಷ್ಟಿ ಸುಧೆ ತಲೆದೂಗಿದೆ.

ಯುಗಾದಿಯ ಶುಭ ಚೈತ್ರದಲಿ
ಅಜ್ನಾತದ ಆಳಕ್ಕೆ ಬೇರುಗಳು ಬಿಟ್ಟು
ನೆಲಕಚ್ಚಿ ನಿಂತ ಗಿಡದ ಹಸಿರೊಡಲಲ್ಲಿ
ಮೊಗ್ಗರಳಿ ಹೂವಾಗಿ
ಬಂದ ಬಿರುಗಾಳಿ
ಚಳಿ ಮಳೆಯನುಂಡು
ಹುದುಗಿದ್ದ ಭೂರಮೆಯ
ಸುಂದರ ಕವಿತೆಗಳು ಬಿರಿಯುತ್ತವೆ...!!

No comments:

Post a Comment